ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಬಲಿಪಶು

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಕೇಶವಕೃಪಾದಲ್ಲಿ ಕುಳಿತ ಗರ್ಭಗುಡಿ ಸಂಸ್ಕೃತಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಲಿಪಶು ಮಾಡಲು ಹೊರಟಿದ್ದು, ಪಕ್ಷದಿಂದ ಹೊರಹಾಕುವ ಮುನ್ನ ಅವರೇ ಹೊರಬರುವುದು ಒಳ್ಳೆಯದು ಎಂದು ಸಂಸದ ಎಚ್.ವಿಶ್ವನಾಥ್ ಸಲಹೆ ಮಾಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಕೆಲವು ವಿಷಯಗಳಲ್ಲಿ ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡಿದ್ದರು. ಅವರ ವಿರುದ್ಧ ಬಿಜೆಪಿಯಲ್ಲಿನ ಗರ್ಭಗುಡಿ ಸಂಸ್ಕೃತಿಯವರು ಕತ್ತಿ ಮಸೆಯುತ್ತಿದ್ದು, ಪಕ್ಷದಿಂದ ಹೊರಹಾಕಿದರೂ ಆಶ್ಚರ್ಯವಿಲ್ಲ. ಯಡಿಯೂರಪ್ಪ ಅವರಿಗೆ ಶಕ್ತಿ, ಸಾಮರ್ಥ್ಯ ಎಲ್ಲವೂ ಇದೆ. ಆದ್ದರಿಂದ ಬಿಜೆಪಿಯಿಂದ ಹೊರಬಂದು ಪರ್ಯಾಯ ಮಾರ್ಗದಲ್ಲಿ ನಡೆಯಬೇಕು~ ಎಂದರು.

ಬಿಜೆಪಿ ದ್ವಿಸದಸ್ಯತ್ವ ಸಮಸ್ಯೆಯಿಂದ ನರಳುತ್ತಿದೆ. ಆರ್‌ಎಸ್‌ಎಸ್‌ನ ಹಿಡಿತ ಬಲವಾಗುತ್ತಿರುವುದರಿಂದ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಘಟಿಸುವುದು ಖಚಿತ. ಮತ್ತೊಮ್ಮೆ ರಾಜ್ಯದಲ್ಲಿ 1978ರ ರಾಜಕೀಯ ಬದಲಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದರು.

`ಉಗ್ರಗಾಮಿಗಳು~: `ಆರ್‌ಎಸ್‌ಎಸ್ ಸಂವಿಧಾನೇತರ ಶಕ್ತಿಯಾಗಿ ಸರ್ಕಾರವನ್ನು ನಿಯಂತ್ರಿಸುತ್ತಿದೆ. ಅವರು ಚುನಾವಣೆಯಲ್ಲಿ ನಿಂತು ಜನಮತ ಪಡೆದಿದ್ದಾರೆಯೇ? ಈ ಸಂಘಟನೆಯವರು ಯಾವಾಗಲೂ ಹಿಂದುಗಳ ಪರ ಹೋರಾಟದ ಮಾತನಾಡುತ್ತಾರೆ. ನಾವು ಹಿಂದುಗಳಲ್ಲವೇ? ನಿತ್ಯವೂ ದೇವಸ್ಥಾನಗಳಿಗೆ ಹೋಗಿ ಹೋಮ-ಹವನ ಮಾಡುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಿಂದುಗಳಲ್ಲವೇ? ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಆರ್‌ಎಸ್‌ಎಸ್ ಏಕೆ ಪ್ರಯತ್ನಿಸುತ್ತಿಲ್ಲ~ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

`ಆರ್‌ಎಸ್‌ಎಸ್‌ನವರು ಉಗ್ರಗಾಮಿಗಳು. `ದೇವನೊಬ್ಬ ನಾಮ ಹಲವು~ ಎಂಬ ಮಾತಿನಂತೆ ಹಲವು ಹೆಸರಿನಲ್ಲಿ ಅವರು ದೇಶದ್ರೋಹಿ ಕೆಲಸ ಮಾಡುತ್ತಾರೆ. ಶ್ರೀರಾಮ ಸೇನೆಯ ಹೆಸರಿನಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದವರೂ ಅವರೇ~ ಎಂದು ವಿಶ್ವನಾಥ್ ಅವರು ಆರೋಪಿಸಿದರು.

ಜೈಲು ಸೇರಲು ಕಾದಿದ್ದಾರೆ: `ದೇವೇಗೌಡರು ಮತ್ತು ಅವರ ಪುತ್ರರು `ಡೀಲ್~ ರಾಜಕಾರಣಿಗಳು ಎಂಬ ಮಾತಿನಲ್ಲಿ ಪೂರ್ಣ ಸತ್ಯವಿದೆ. ಅವರ ಕುಟುಂಬದ ಸದಸ್ಯರು ಜೈಲು ಸೇರಲು ಸರದಿಯಲ್ಲಿ ಕಾದಿದ್ದಾರೆ. ದಲ್ಲಾಳಿ ರಾಜಕಾರಣದ ಮೂಲಕ ಇಡೀ ರಾಜ್ಯವನ್ನೇ ಮಾನಸಿಕ ರೋಗಿಗಳ ತಾಣ ಮಾಡಿದ ಕುಮಾರಸ್ವಾಮಿ ಈಗ ನನ್ನನ್ನು ನಿಮ್ಹಾನ್ಸ್‌ಗೆ ಸೇರಿಸುವ ಮಾತನಾಡುತ್ತಿದ್ದಾರೆ~ ಎಂದು ಕುಟುಕಿದರು.

ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ಪಕ್ಷ ಶಕ್ತಿಯುತವಾಗಿದೆ. ಜನಪರ ವಿಚಾರಗಳ ಆಧಾರದ ಮೇಲೆ ಸ್ಪಂದಿಸುವ ಮನೋಭಾವವಿದೆ. ಇಲ್ಲಿ ಕೆಲವರು ಮುಖ್ಯಮಂತ್ರಿ ಆಗುವುದಕ್ಕಾಗಿ ದೇವೇಗೌಡರು, ಯಡಿಯೂರಪ್ಪ ಅವರ ನೆಂಟಸ್ತನ ಮಾಡಿಕೊಂಡವರೂ ಇದ್ದಾರೆ. ಆದರೆ, ಅವರಿಂದ ಏನೂ ಆಗದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ನೇಮಕ
ಬೆಂಗಳೂರು: ಹಿರಿಯ ಕೆಎಎಸ್ ಅಧಿಕಾರಿ ಕೆ.ವಿದ್ಯಾಕುಮಾರಿ ಅವರನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT