ಶಿವಮೊಗ್ಗ: ಬಿಜೆಪಿ ರಾಷ್ಟ್ರೀಯ ಮುಖಂಡರು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜತೆ ಸೋಮವಾರ ಸೊರಬದ ಹೊಸಬಾಳೆಯ ಆರ್ಎಸ್ಎಸ್ ಮುಖಂಡರೊಬ್ಬರ ಮನೆಯಲ್ಲಿ ಗುಪ್ತ ಸಮಾಲೋಚನೆ ನಡೆಸಿದ್ದಾರೆ. ಆರ್ಎಸ್ಎಸ್ನ ದತ್ತಾತ್ರೇಯ ಹೊಸಬಾಳೆ ಅವರ ತಾಯಿ ಈಚೆಗೆ ನಿಧನರಾದ ಹಿನ್ನೆಲೆಯಲ್ಲಿ ಅವರ ಪುಣ್ಯಸ್ಮರಣೆ ಕಾರ್ಯದಲ್ಲಿ ಭಾಗವಹಿಸಲು ಬಂದಾಗ ಈ ಭೇಟಿ ನಡೆದಿದೆ.
ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ ನಂತರ ದತ್ತಾತ್ರೇಯ ಹೊಸಬಾಳೆ ನಿವಾಸದ ಸಮೀಪದಲ್ಲೇ ಇರುವ ಅವರ ಸಂಬಂಧಿಕರಾದ ಪದ್ಮನಾಭ ಅವರ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಹಾಗೂ ಯಡಿಯೂರಪ್ಪ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ಮಾತುಕತೆ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಷಿ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಸಂಸತ್ ಸದಸ್ಯ ಅನಂತ್ ಕುಮಾರ್, ಬಿ.ವೈ.ರಾಘವೇಂದ್ರ ಕೂಡ ಇದ್ದರು.
ಮಾತುಕತೆ ಮುಗಿಸಿ ಹೊರಗೆ ಬರುತ್ತಿದ್ದಂತೆ ಮುತ್ತಿಗೆ ಹಾಕಿದ ಮಾಧ್ಯಮಗಳಿಗೆ ರಾಜನಾಥ್ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ‘ನಿಮ್ಮ ಕುತೂಹಲ ಅರ್ಥವಾಗುತ್ತದೆ. ಆದರೆ, ಇಲ್ಲಿ ರಾಜಕೀಯ ಮಾತುಕತೆ ನಡೆದಿಲ್ಲ. ಇನ್ನೂ ನಾಲ್ಕೈದು ದಿವಸ ಕಾದು ನೋಡಿ; ಸಿಹಿ ಸುದ್ದಿ ಸಿಗುತ್ತದೆ’ ಎಂದಷ್ಟೇ ಹೇಳಿ ಹೊರನಡೆದರು.