ಗುಲ್ಬರ್ಗ: `ಯಡಿಯೂರಪ್ಪ ಬಿಜೆಪಿಗೆ ಬರುವುದು, ಬಿಡುವುದು ನನಗೆ ಗೊತ್ತಿಲ್ಲ. ಅದು ಕೇಂದ್ರದ ನಾಯಕರಿಗೆ ಬಿಟ್ಟ ವಿಚಾರ' ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದರು.
ಸೂಪರ್ ಮಾರ್ಕೆಟ್ನಲ್ಲಿರುವ ಎಚ್ಕೆಸಿಸಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷದ ಸಮಾಲೋಚನಾ ಹಾಗೂ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.
`ಚುನಾವಣೆ ರಾಜಕಾರಣದ ಒಂದು ಭಾಗ. ಸೋತಿದ್ದೇವೆ ಎಂದು ರಾಜಕೀಯದಿಂದ ವಿಮುಖರಾಗಬಾರದು. 1985ರಲ್ಲಿ ಬಿಜೆಪಿ ಕೇವಲ 2 ಕಡೆ ಗೆದ್ದಿತ್ತು. ಈಗ ದೊಡ್ಡಪಕ್ಷವಾಗಿ ಬೆಳೆದಿದೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸೋಣ' ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
`ಕಾಂಗ್ರೆಸ್ ಸರ್ಕಾರ ಇನ್ನೂ ಮಧುಚಂದ್ರದ ಅವಧಿಯಲ್ಲಿದೆ. ನಾವು ಈಗಲೇ ಟೀಕಿಸುವುದಿಲ್ಲ. 3 ತಿಂಗಳು ಸರ್ಕಾರ ನಡೆಸಲಿ. ಆರಂಭದಲ್ಲೇ ಹೆಚ್ಚಿನ ಮದ್ಯದಂಗಡಿಗಳಿಗೆ ಪರವಾನಗಿ, ಅಗ್ಗದ ಮದ್ಯ ಮಾರಾಟದಂಥ ಯೋಜನೆಗೆ ಕೈ ಹಾಕಿರುವ ಸಿದ್ದರಾಮಯ್ಯ ಸರ್ಕಾರ ತಪ್ಪು ಮಾಡುತ್ತಿದೆ ಎಂದು ಕೆಲ ಕಾಂಗ್ರೆಸ್ಸಿಗರು ಹಾಗೂ ಮಠಾಧೀಶರೇ ಟೀಕಿಸುತ್ತಿದ್ದಾರೆ' ಎಂದರು.