ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಖಾಸಗಿ ದೂರು ಸಲ್ಲಿಸಿರುವ ವಕೀಲ ಬಿ. ವಿನೋದ್ ಅವರ ಹೇಳಿಕೆಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಶನಿವಾರ ದಾಖಲಿಸಿಕೊಂಡಿತು. ತಾವು ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳು ಸತ್ಯ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಯಡಿಯೂರಪ್ಪ ಅವರು ಘೋಷಿತ ಆದಾಯಕ್ಕಿಂತ ಹೆಚ್ಚಿನ ಮೊತ್ತದ ಆಸ್ತಿ ಹೊಂದಿದ್ದಾರೆ. ಈ ಆಸ್ತಿಯನ್ನು ಅವರು ತಮ್ಮ ಹತ್ತಿರದ ಸಂಬಂಧಿಕರು ಹಾಗೂ ಆಪ್ತರ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ ಎಂದು ಶಿವಮೊಗ್ಗ ಮೂಲದವರಾದ ವಿನೋದ್ ಅವರು ದೂರಿನಲ್ಲಿ ಆರೋಪ ಮಾಡಿದ್ದಾರೆ. ಬಿ.ಕೆ. ಸೋಮಶೇಖರ, ಆದಿಲಕ್ಷ್ಮಮ್ಮ, ಬಿ.ಎಸ್. ಉಮಾದೇವಿ, ಬಿ.ಕೆ. ರಾಧಾಮಣಿ ಮತ್ತು ಎಚ್.ವಿ. ಮಂಜುನಾಥ್ ಅವರನ್ನೂ ಆರೋಪಿಗಳು ಎಂದು ದೂರಿನಲ್ಲಿ ಹೇಳಲಾಗಿದೆ.
ತಾವು ದೂರಿನಲ್ಲಿ ಮಾಡಿರುವ ಎಲ್ಲ ಆರೋಪಗಳಲ್ಲೂ ಸತ್ಯಾಂಶವಿದೆ ಮತ್ತು ಅವುಗಳಿಗೆ ದಾಖಲೆಗಳ ಆಧಾರವಿದೆ ಎಂದು ದೂರುದಾರರು ತಿಳಿಸಿದರು. ಅವರ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ದೂರನ್ನು ವಿಚಾರಣೆಗೆ ಸ್ವೀಕರಿಸುವ ಅಥವಾ ತಿರಸ್ಕರಿಸುವ ಕುರಿತು ಇದೇ 24ರಂದು ಆದೇಶ ನೀಡುವುದಾಗಿ ತಿಳಿಸಿ ವಿಚಾರಣೆ ಮುಂದೂಡಿದರು.