ಬೆಂಗಳೂರು (ಪಿಟಿಐ): ಭೂ ಅವ್ಯವಹಾರ ಹಾಗೂ ಗಣಿ ಕಪ್ಪ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮಂಗಳವಾರ ಎಫ್ಐಆರ್ ದಾಖಲಿಸಿದ್ದ ಸಿಬಿಐ ಬುಧವಾರ ಬಿಎಸ್ವೈ ಸೇರಿದಂತೆ ಹಲವು ಸಂಬಂಧಿಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ.
ಬಿಎಸ್ವೈ ಪುತ್ರರಾದ ಸಂಸದ ರಾಘವೇಂದ್ರ, ವಿಜಯೇಂದ್ರ ಹಾಗೂ ಅಳಿಯ ಆರ್.ಎನ್. ಸೋಹನ್ ಕುಮಾರ್ ಅವರಿಗೆ ಸೇರಿದ ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿರುವ ನಿವಾಸಗಳ ಮೇಲೆ ಹೈದರಾಬಾದ್ ಮತ್ತು ಬೆಂಗಳೂರಿನ ಸಿಬಿಐ ಅಧಿಕಾರಿಗಳು ಜಂಟಿಯಾಗಿ ಈ ದಾಳಿ ನಡೆಸಿದ್ದಾರೆ.
ಸಿಬಿಐ ಮಹಾ ನಿರೀಕ್ಷಕ ಲಕ್ಷ್ಮೀ ನಾರಾಯಣ ಅವರ ನೇತೃತ್ವದ 9 ಅಧಿಕಾರಿಗಳ ತಂಡವು ಯಡಿಯೂರಪ್ಪ ಅವರಿಗೆ ಸೇರಿರುವ ಡಾಲರ್ಸ್ ಕಾಲೋನಿ ಹಾಗೂ ರೇಸ್ ಕೋರ್ಸ್ ರಸ್ತೆಯ ನಿವಾಸಗಳು ಹಾಗೂ ಬಿಎಸ್ವೈ ಪುತ್ರನ ಒಡೆತನದ ಸಂಸ್ಥೆಯೊಂದರ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದವು.
ಬೆಳಗ್ಗೆ 6.15ಕ್ಕೆ ಪ್ರಾರಂಭವಾದ ಈ ದಾಳಿಯು ದಿನಪೂರ್ತಿ ನಡೆಯುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದರು.
ರಾಚೇನಹಳ್ಳಿಯ ಸಂಶಯಾಸ್ಪದ ಭೂ ವ್ಯವಹಾರ, ಸೌತ್ವೆಸ್ಟ್ ಮೈನಿಂಗ್ ಕಂಪೆನಿ ಹಾಗೂ ಗಣಿ ಉದ್ಯಮಿ ಪ್ರವೀಣ್ ಚಂದ್ರ ಅವರಿಂದ ಹಣ ಪಡೆದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿ.ಎಚ್.ಕಪಾಡಿಯಾ ನೇತೃತ್ವದ ಅರಣ್ಯ ಪೀಠ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು.