ಗಂಗಾವತಿ: ಬಿಜೆಪಿಯಿಂದ ಸ್ಥಾನಮಾನ ಕಳೆದುಕೊಂಡು ದೂರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈಗ ಜಾತ್ಯತೀತವಾದದ ಬಗ್ಗೆ ಜ್ಞಾನದೋಯವಾಗಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ವ್ಯಂಗ್ಯವಾಡಿದರು.
ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ಯತೀತ ವಿಚಾರಕ್ಕೆ ಸಂಬಂಧಪಟ್ಟಂತೆ ಅವಕಾಶ ದೊರೆತರೆ ಅಥವಾ ಸಂದರ್ಭ ಬಂದರೆ ಬಿಎಸ್ವೈ ಅವರೊಂದಿಗೂ ಚರ್ಚಿಸಲೂ ನಾನು ಸಿದ್ದ ಎಂದರು. ಬಿಜೆಪಿಯಲ್ಲಿದ್ದಾಗಲೂ ಯಡಿಯೂರಪ್ಪ ಅವರಿಗೆ ಜಾತ್ಯತೀತದ ಬಗ್ಗೆ ಕಲ್ಪನೆ ಇತ್ತು. ಆದರೆ ಪಕ್ಷದ ವೇದಿಕೆಯಲ್ಲಿ ಕೋಮುವಾದದ ಬಗ್ಗೆ ಮಾತನಾಡಿದರೆ ಸರಿಯಲ್ಲ ಎಂಬ ಅಧಿಕಾರದ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡಿರುವುದು ಇದೀಗ ಸಾಬೀತಾಗಿದೆ ಎಂದರು.
ಜಾತ್ಯತೀತ ಹಿನ್ನೆಲೆ ಪಕ್ಷಕಟ್ಟುತ್ತಿರುವ ಯಡಿಯೂರಪ್ಪ ಅವರಿಂದ ಆಹ್ವಾನ ಬಂದರೆ ಪಕ್ಷಕ್ಕೆ ಹೋಗುವಿರಾ ಎಂಬ `ಪ್ರಜಾವಾಣಿ~ಯ ಪ್ರಶ್ನೆಗೆ, `ಈಗಾಗಲೆ ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದೇನೆ. ಬಿಎಸ್ವೈ ಅವರ ಜಾತ್ಯತೀತದ `ವರ್ಗ~ ಬೇರೆಯೇ ಆಗಿದೆ~ ಎಂದರು.
ವೇದಿಕೆಯಲ್ಲಿ ಉತ್ತರ: ನಾನು ಜೆಡಿಎಸ್ ಸೇರುತ್ತಿರುವ ಹಿನ್ನೆಲೆ ವಿನಾಕಾರಣ ಹೇಳಿಕೆಗಳನ್ನು ನೀಡುತ್ತಿರುವ ವ್ಯಕ್ತಿಗಳಿಗೆ ನಾನು ಮಾಧ್ಯಮದ ಮೂಲಕವಲ್ಲ, ನವೆಂಬರ್ 4ರಂದು ಪಕ್ಷದ ವೇದಿಕೆಯಲ್ಲಿ ರಾಷ್ಟ್ರ, ರಾಜ್ಯ ಮುಖಂಡರ ಎದುರು ಉತ್ತರ ನೀಡುತ್ತೇನೆ.
ಕೆಲವರಿಗೆ ಚುನಾವಣೆ, ಸಂಘಟನೆ, ಕಾರ್ಯಕರ್ತರ ನಿಭಾಯಿಸುವುದು ಎಂದರೆ ಆಟ ಎನಿಸಿದೆ. ಮನೆಗೆ ಕರೆದು ನಾಲ್ಕು ಜನಕ್ಕೆ ಚಹಾ ಕುಡಿಸಿ ಕಳುಹಿಸುವುದಷ್ಟೆ ಪಕ್ಷ ಸಂಘಟನೆ ಅಲ್ಲ ಎಂಬುವುದು ಮನಗಾಣ ಬೇಕು ಎಂದು ಪರೋಕ್ಷವಾಗಿ ಪಿ. ಅಖ್ತರ್ಸಾಬರನ್ನು ಟೀಕಿಸಿದರು.
ಕೆಲವರು ಪಕ್ಷ, ರಾಜಕೀಯ ಎಂದು ನೆಪ ಹೇಳಿಕೊಂಡು ದೇಣಿಗೆ ಸಂಗ್ರಹ, ಹಣ ವಸೂಲಿಗಾಗಿಯೆ ಪಕ್ಷದಲ್ಲಿದ್ದಾರೆ. ಗಾಂಧಿಚೌಕಿನಲ್ಲಿ ಅವರು ತೆಗೆದುಕೊಂಡು ಹೋಗಿದ್ದ ಜೆಡಿಎಸ್ ಪಕ್ಷವನ್ನು ಅಲ್ಲ, ಬಾಳೆಹಣ್ಣಿನ ಸಿಪ್ಪೆ ಎಂದು ಪಾಡಗುತ್ತಿ ಅವರ ಆರೋಪಕ್ಕೆ ಅನ್ಸಾರಿ ತಿರುಗೇಟು ನೀಡಿದರು. ಶಾಸಕ ಪರಣ್ಣ ಮುನವಳ್ಳಿ ನನ್ನ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಜನರನ್ನು ಸಂಪರ್ಕಿಸುವ ಯತ್ನ ಮಾಡಿದ್ದಾರೆ. ಆದರೆ ನಾನು ವಾರ್ಡ್ಗಳಲ್ಲಿ ಸಂಚರಿಸಿ ನೇರ ಜನರೆದುರೆ ಶಾಸಕರ ಹಣೆ ಬರಹವನ್ನು ತೆಗೆದಿಡುತ್ತಿದ್ದೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.