ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರದ ಬನಶಂಕರಿ 3ನೇ ಹಂತದಲ್ಲಿರುವ ಹೊಸಕೆರೆಹಳ್ಳಿ ಉದ್ಯಾನದ ಒಂದು ಭಾಗದಲ್ಲಿ ಮಿನಿ ಈಜುಕೊಳ ಹಾಗೂ ಮಹಿಳೆಯರಿಗೆ ವ್ಯಾಯಾಮ ಕೊಠಡಿ ನಿರ್ಮಿಸುವ ಕುರಿತು ಹೈಕೋರ್ಟ್ ತೀರ್ಪಿನನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ನಿಯಮ 330ರ ಅಡಿ ಬಿಜೆಪಿಯ ಪ್ರೊ.ಆರ್.ದೊರೆಸ್ವಾಮಿ ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಅವರು, `ಇದೇ ತಿಂಗಳ 14ರಂದು ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದ್ದು, ನ್ಯಾಯಾಲಯದ ಮನವೊಲಿಕೆಗೆ ಸರ್ಕಾರ ಯತ್ನಿಸಲಿದೆ~ ಎಂದು ಹೇಳಿದರು.
ಹೊಸಕೆರೆಹಳ್ಳಿ ಕ್ರಾಸ್ 80 ಅಡಿ ರಸ್ತೆಯಲ್ಲಿ ಸಾರ್ವಜನಿಕರಿಗಾಗಿ ಮಿನಿ ಈಜುಕೊಳ ನಿರ್ಮಿಸುವಂತೆ ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಕೋರಿಕೆ ಮೇರೆಗೆ, ಬಿಬಿಎಂಪಿ ಅಂದಾಜು ಪಟ್ಟಿ ತಯಾರಿಸಿ ಮಂಜೂರಾತಿ ನೀಡಿ ಟೆಂಡರ್ ಪ್ರಕ್ರಿಯೆ ಕೂಡ ನಡೆಸಿ ಕಾರ್ಯಾದೇಶ ಹೊರಡಿಸಿತ್ತು. ಆದರೆ, ಈ ಜಾಗದಲ್ಲಿ ಮಿನಿ ಈಜುಕೊಳ ನಿರ್ಮಿಸುವುದನ್ನು ಪ್ರಶ್ನಿಸಿ ಬಿ.ಎಸ್.ಕೆ. ವ್ಯಾಲಿ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ನ್ಯಾಯಾಲಯ 2011ರ ಜನವರಿ 30ರಂದು ನೀಡಿದ ಮಧ್ಯಂತರ ಆದೇಶದಲ್ಲಿ ಈ ಜಾಗ ಬದಲಾವಣೆ ಮಾಡದಂತೆ ಸೂಚಿಸಿ ತಡೆಯಾಜ್ಞೆ ನೀಡಿದೆ ಎಂದರು.
ಈ ಪ್ರಕರಣದಲ್ಲಿ ನ್ಯಾಯಾಲಯ ಮಿನಿ ಈಜುಕೊಳ ಸ್ಥಾಪನೆಗೆ ಅವಕಾಶ ನೀಡದಿದ್ದಲ್ಲಿ ಈ ಭಾಗದಲ್ಲಿಯೇ ಪರ್ಯಾಯ ಜಾಗ ಹುಡುಕಿ ಮಿನಿ ಈಜುಕೊಳ ಹಾಗೂ ಮಹಿಳೆಯರಿಗೆ ವ್ಯಾಯಾಮ ಕೊಠಡಿ ನಿರ್ಮಿಸಲಾಗುವುದು ಎಂದು ತಿಳಿಸಿದರು.