ಬೆಂಗಳೂರು: ನಗರದ ಬ್ರಿಗೇಡ್ ರಸ್ತೆಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಭಾನುವಾರ ಮತಪ್ರಚಾರ ಕೈಗೊಂಡರು. ವಾರಾಂತ್ಯವಾಗಿದ್ದರಿಂದ ಬಹುಪಾಲು ಯುವಜನತೆಯೇ ಪ್ರಚಾರದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧ ಸಹಿ ಸಂಗ್ರಹ ನಡೆಯಿತು.
ಕಾರ್ಯಕರ್ತರಲ್ಲಿಯೇ ಇದ್ದ ಉತ್ತಮ ನೃತ್ಯಪಟುಗಳ ತಂಡ ‘ಜಾದೂ ಡಾನ್ಸ್’ ಫ್ಲ್ಯಾಷ್ ಮಾಬ್ ನೃತ್ಯ ಪ್ರದರ್ಶನ ನೀಡಿತು.ದೇಶಭಕ್ತಿ ಗೀತೆ ಹಾಗೂ ಆಮ್ ಆದ್ಮಿ ಗೀತೆಗಳಿಗೆ ಪೊರಕೆ ಹಿಡಿದು ಹೆಜ್ಜೆ ಹಾಕಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಬಾಲಕೃಷ್ಣ, ‘ಬೆಂಗಳೂರು ಉತ್ತರದಲ್ಲಿ ಸಂಸದರ ಹೆಸರೇ ಜನರಿಗೆ ತಿಳಿದಿಲ್ಲ. ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಆಮ್ ಆದ್ಮಿಯ ಅಭ್ಯರ್ಥಿಗಳು ಇಲ್ಲ. ಹೊಸ ಬದಲಾವಣೆಗೆ ಜನ ಆದ್ಯತೆ ನೀಡಬೇಕು’ ಎಂದು ಹೇಳಿದರು.
‘ಪಾಲಿಕೆ ರಸ್ತೆ ಅಭಿವೃದ್ಧಿಯ ಸಲುವಾಗಿ ₨10,000 ಕೋಟಿಗಳನ್ನು ವಿನಿಯೋಗಿಸಿದೆ. ಆದರೆ ರಸ್ತೆ ವ್ಯವಸ್ಥೆ ಏನಾದರೂ ಸುಧಾರಿಸಿದೆಯೇ?’ ಎಂದು ಪ್ರಶ್ನಿಸಿದರು. ದಕ್ಷಿಣ ಲೋಕಸಭಾ ಅಭ್ಯರ್ಥಿ ನೀನಾ ಪಿ.ನಾಯಕ್, ಉತ್ತರ ಲೋಕಸಭಾ ಅಭ್ಯರ್ಥಿ ಬಾಬು ಮ್ಯಾಥ್ಯು ಉಪಸ್ಥಿತರಿದ್ದರು.