ಶ್ರೀನಿವಾಸಪುರ: ಪಟ್ಟಣದಲ್ಲಿ ಬಿಜಿಎಂಎಲ್ ಪುನರಾರಂಭ ಹೋರಾಟ ಸಮಿತಿ ಸದಸ್ಯರು ಕೆಜಿಎಫ್ ಚಿನ್ನದ ಗಣಿಯನ್ನು ಮತ್ತೆ ಆರಂಭಿಸುವಂತೆ ಆಗ್ರಹಿಸಿ ಸಹಿ ಸಂಗ್ರಹ ಮಾಡಿದರು.
ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಮೀಪ ಈಚೆಗೆ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಪಿ.ಆರ್.ಸೂರ್ಯನಾರಾಯಣ ಸಹಿ ಸಂಗ್ರಹ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, ಕೋಲಾರ ಜಿಲ್ಲೆಯ ಹೆಮ್ಮೆ ಎನಿಸಿದ್ದ ಚಿನ್ನದ ಗಣಿಗಳನ್ನು ವಿನಾಕಾರಣ ಮುಚ್ಚಿ ಕಾರ್ಮಿಕರ ಕುಟುಂಬಗಳನ್ನು ಬೀದಿಪಾಲು ಮಾಡಲಾಗಿದೆ ಎಂದು ಆಪಾದಿಸಿದರು.
ಗಣಿಗಳಲ್ಲಿ ಇನ್ನೂ ಚಿನ್ನದ ಅದಿರು ಇರುವ ಬಗ್ಗೆ ತಜ್ಞರು ವರದಿ ನೀಡಿದ್ದಾರೆ. ಆದರೆ ಸರ್ಕಾರ ನಷ್ಟದ ಹೆಸರಿನಲ್ಲಿ ಗಣಿಯನ್ನು ಮುಚ್ಚಿದೆ. ಇದು ಅಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನರ ಕೆಲಸಕ್ಕೆ ಕುತ್ತು ತಂದಿದೆ. ಅವರು ಮತ್ತು ಅವರ ಕುಟುಂಬಗಳ ಸದಸ್ಯರು ಕಷ್ಟದ ಬದುಕನ್ನು ಬದುಕುತ್ತಿದ್ದಾರೆ.