ಬಾಗಪತ್ (ಪಿಟಿಐ): ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಮತ್ತು ಬಾಗಪತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತ್ಯಪಾಲ್ ಸಿಂಗ್ ಅವರ ಮೇಲೆ ಗುರುವಾರ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ.
‘ಸಿಂಗ್ ಅವರು ಬದೌತ್ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಕಾಪುರ್ ಮತಗಟ್ಟೆಯಲ್ಲಿನ ಪರಿಸ್ಥಿತಿ ವೀಕ್ಷಣೆಗೆಂದು ತೆರಳಿದ ಸಂದರ್ಭದಲ್ಲಿ, ಅಲ್ಲಿನ ಕೆಲವು ಚಟುವಟಿಕೆಗಳಿಗೆ ಅವರು ಆಕ್ಷೇಪ ವ್ಯಕ್ತಪಡಿಸಿದಾಗ ವ್ಯಕ್ತಿಯೊಬ್ಬ ಸಿಂಗ್ ಮೇಲೆ ಹಲ್ಲೆ ನಡೆಸಿದ. ಇದರಿಂದಾಗಿ ಘರ್ಷಣೆ ಉಂಟಾಯಿತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಶಾಹಿ ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ಲಖನೌ ಬಿಜೆಪಿ ವಕ್ತಾರ ವಿಜಯ್ ಬಹಾದ್ದೂರ್ ಪಾಠಕ್, ‘ಹತಾಶೆಗೊಳಗಾದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷ ಆರ್ಎಲ್ಡಿ ಈ ಕೃತ್ಯಎಸಗಿವೆ. ಭದ್ರತೆ ನೀಡುವಂತೆ ಸಿಂಗ್ ಮನವಿ ಮಾಡಿದ್ದರೂ ಅವರಿಗೆ ಸೂಕ್ತ ರಕ್ಷಣೆ ನೀಡಲಾಗಿಲ್ಲ’ ಎಂದು ದೂರಿದ್ದಾರೆ.