ದಕ್ಷಿಣ ಕನ್ನಡ ಜಿಲ್ಲಾ-ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಅಮೋಘ ಯಶಸ್ಸು ಕಂಡ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಬ್ಬದ ವಾತಾವರಣ. ವಿಜೇತ ಅಭ್ಯರ್ಥಿಗಳು, ಅಭಿಮಾನಿಗಳು ಕೊರಳ ತುಂಬಾ ಹಾಕಿದ್ದ ಹಾರಗಳನ್ನೂ ತೆಗೆಯದೇ ಜಯ ಘೋಷದ ನಡುವೆಯೇ ಗುಂಪುಗುಂಪಾಗಿ ಕಚೇರಿಗೆ ಅಕ್ಷರಶಃ ನುಗ್ಗುತ್ತಿದ್ದರು. ಕಚೇರಿಯ ಮುಖ್ಯ ದ್ವಾರದ ಮಗ್ಗಲಲ್ಲೇ ಇದ್ದ ಸ್ವಾಗತಕಾರರ ಮೇಜಿನಲ್ಲಿ ಮಿಠಾಯಿ-ಲಾಡುಗಳ ದೊಡ್ಡ ಪೊಟ್ಟಣವಿತ್ತು.
‘ಎರಡು ಲಾಡು ತಗೊಳ್ಳಿ. ಒಂದು ಜಿಲ್ಲಾ ಪಂಚಾಯಿತಿ ವಿಜಯಕ್ಕೆ. ಇನ್ನೊಂದು ತಾಲ್ಲೂಕು ಪಂಚಾಯಿತಿ ಗೆಲುವಿಗೆ’ ಎಂದು ಬಂದವರಿಗೆ ಹೇಳುತ್ತಿದ್ದರು ಹಿರಿಯ ಕಾರ್ಯಕರ್ತ ಪ್ರವೀಣ್ ಕುಮಾರ್.
ಅಲ್ಲಿ ಪಕ್ಷದ ಪ್ರಮುಖ ನಾಯಕರು, ನಗರಪಾಲಿಕೆ ಸದಸ್ಯರು, ಪಕ್ಷದ ವಿವಿಧ ವಿಭಾಗಗಳ ಪದಾಧಿಕಾರಿಗಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್, ಶಾಸಕ ಎನ್.ಯೋಗೀಶ್ ಭಟ್, ನಗರ ಬಿಜೆಪಿ ಅಧ್ಯಕ್ಷ ಶ್ರೀಕರ ಪ್ರಭು ಸಂಭ್ರಮದಲ್ಲಿದ್ದರು. ಕೆಲವರು ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿ ನೋಡಿ ಪಕ್ಷದ ಮುನ್ನಡೆಗೆ ಹೋ ಎಂದು ಕೂಗಿ ಸಂತಸ ವ್ಯಕ್ತಪಡಿಸುತ್ತಿದ್ದರು.