ಮದ್ದೂರು: ಕೇಂದ್ರದ ಯುಪಿಎ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆ ಖಂಡಿಸಿ ಪಟ್ಟಣದ ತಾಲ್ಲೂಕು ಕಚೇರಿ ಎದುರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ಧರಣಿ ನಡೆಸಿದರು.
ಪಟ್ಟಣದ ಟಿ.ಬಿ ವೃತ್ತದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು, ದಾರಿಯುದ್ದಕೂ ಯುಪಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿ ಸಿದರು. ನಂತರ ಅಲ್ಲಿಂದ ತಾಲ್ಲೂಕು ಕಚೇರಿಗೆ ಆಗಮಿಸಿ ಅಲ್ಲಿ ಸಂಜೆಯವರೆಗೆ ನಿರಂತರ ಧರಣಿ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಯುವ ಅಧ್ಯಕ್ಷ ಆರ್.ಜಿ.ಮನು ಮಾತನಾಡಿ, ಅಲ್ಪಸಂಖ್ಯಾತರನ್ನು ಓಲೈಸಿ ಮತಬ್ಯಾಂಕ್ ಗಿಟ್ಟಿಸಲು ಕೇಂದ್ರ ಯುಪಿಎ ಸರ್ಕಾರ ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆ ಮಂಡಿಸಲು ಮುಂದಾಗಿದೆ. ಈ ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ಕೆಡಕು ಮಾಡುವ ಹುನ್ನಾರಕ್ಕೆ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಉಪಾಧ್ಯಕ್ಷ ಹೊಸಕೆರೆ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಸಿದ್ದ ರಾಮೇಗೌಡ, ಮಹಿಳಾ ಕಾರ್ಯದರ್ಶಿ ರೂಪ ಮಾತನಾಡಿದರು. ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಸಿದ್ದು, ತಾಲ್ಲೂಕು ಕಾರ್ಯದರ್ಶಿ ರಘುನಂದನ್, ಮುಖಂಡರಾದ ವೀರಭದ್ರಸ್ವಾಮಿ, ಹುಚ್ಚಪ್ಪ, ಕೆ.ಎಂ.ರಮೇಶ್, ಸುನೀಲ್, ಪ್ರಕಾಶ್, ಶ್ರೀಧರ್ ಹಾಜರಿದ್ದರು.