ಬಳ್ಳಾರಿ: ಇದೇ 15ರ ನಂತರ ತಾವು ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಇತ್ತೀಚೆಗಷ್ಟೇ ಆ ಪಕ್ಷ ಸೇರಿದ್ದ ಗಣಿ ಉದ್ಯಮಿ ಟಪಾಲ್ ಗಣೇಶ್ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಪಕ್ಷದಲ್ಲಿನ ಜಾತಿ ರಾಜಕೀಯ ಅಸಹ್ಯ ಹುಟ್ಟಿಸುವಂತಿದೆ. ಜಾತಿ ಪ್ರಭಾವ ಇದ್ದವರು ಮಾತ್ರ ರಾಜಕಾರಣದಲ್ಲಿರಬೇಕು ಎನ್ನುವಂತಹ ವಾತಾವರಣವಿದೆ. ಇದರಿಂದ ಬೇಸತ್ತು ಆ ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದೇನೆ~ ಎಂದು ಅವರು ನುಡಿದರು.
ಬೇರೆ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಹೋರಾಟಗಾರರಿಗೆ ರಾಜಕೀಯ ಸರಿ ಹೊಂದುವುದಿಲ್ಲ ಎಂಬುದು ತಮಗೆ ಮನವರಿಕೆಯಾಗಿದೆ ಎಂದರು.
ಬಳ್ಳಾರಿ ಕಾಯ್ದಿಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಗ್ರಾಮಗಳ ಸರಹದ್ದು ಗುರುತಿಸಿ, ಆ ಭಾಗದಲ್ಲಿ ನಡೆದಿರುವ ರಾಜ್ಯದ ಖನಿಜ ಸಂಪತ್ತಿನ ಲೂಟಿಯ ಬಗ್ಗೆ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಒತ್ತಾಯಿಸಿದರು.
ಸಾವಿರಾರು ಕೋಟಿ ರೂಗಳ ಖನಿಜ ಸಂಪತ್ತು ಲೂಟಿಯಾಗಿದೆ. ತನಿಖೆಗೆ ಯು.ವಿ. ಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಅವರು ಆಗ್ರಹಿಸಿದರು.