ಬೆಂಗಳೂರು: ‘ದೇಶದ ಬುನಾದಿಯನ್ನು ದುರ್ಬಲಗೊಳಿಸಲು ಪಿತೂರಿ ನಡೆಸಿರುವ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಂದ ಮುಸ್ಲಿಮರು ಮತ್ತು ನಮ್ಮ ಇತರ ಸಹೋದರರು ದೂರವಿರಬೇಕು ಎಂದು ಕೋರಲು’ ಅಮೀರ್ ಎ ಷರಿಯತ್ನ ರಾಜ್ಯ ಘಟಕದ ಮುಖಂಡ ಮೌಲಾನಾ ಮುಫ್ತಿ ಮಹಮದ್ ಅಶ್ರಫ್ ಆಲಿ ಬಕ್ವಿ ಅವರ ನೇತೃತ್ವದಲ್ಲಿ ನಡೆದ ವಿವಿಧ ಮುಸ್ಲಿಂ ಸಂಘಟನೆಗಳ ಸಭೆ ನಿರ್ಣಯ ಕೈಗೊಂಡಿದೆ.
‘ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ, ಸಮಾನ ನಾಗರಿಕ ಸಂಹಿತೆ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬದ್ಧವಾಗಿರುವುದಾಗಿ ಹೇಳಿದೆ.
ಈ ನಿಲುವು ಸಂವಿಧಾನಕ್ಕೆ ವಿರುದ್ಧ, ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಇಸ್ಲಾ-ಮಿಕ್ ಷರಿಯಾಕ್ಕೆ ವಿರುದ್ಧ. ದೇಶವನ್ನು ಮತ್ತೆ ವಿಭಜನೆಯತ್ತ ಕೊಂಡೊಯ್ಯುವ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಕುರಿತು ದೇಶದ ಶಾಂತಿಪ್ರಿಯ ನಾಗರಿಕರು ಎಚ್ಚರ ವಹಿಸಬೇಕು’ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.