ನವದೆಹಲಿ(ಪಿಟಿಐ): ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಪ್ರಚಾರ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ತಯಾರಿಸಿದ ಪಟ್ಟಿಯಲ್ಲಿ ಇವರ ಹೆಸರಿದ್ದು ಚುನಾವಣಾ ಆಯೋಗದ ಒಪ್ಪಿಗೆಗಾಗಿ ಕಳುಹಿಸಿಕೊಡಲಿದೆ.
ಅನಾರೋಗ್ಯದ ಕಾರಣ ಸಕ್ರಿಯ ರಾಜಕಾರಣದಿಂದ ದೂರವಿದ್ದ ವಾಜಪೇಯಿ ಅವರ ಹೆಸರು ಮೊದಲನೆಯದಾಗಿ ಪ್ರಕಟಗೊಂಡಿದೆ. ಬಿಡುಗಡೆಗೊಳಿಸಲಾದ ಪಟ್ಟಿಯಲ್ಲಿ ಮೋದಿ ಹೆಸರು ಪ್ರಕಟಗೊಂಡಿದ್ದರೂ ಮೋದಿ ವಿರೋಧಿ, ಬಿಜೆಪಿಯ ಮಾಜಿ ಕಾರ್ಯದರ್ಶಿ ಸಂಜಯ್ ಜೋಶಿ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿ ಹೊತ್ತಿರುವುದರಿಂದ ಪ್ರಚಾರದಲ್ಲಿ ಅವರು ಪಾಲ್ಗೊಳ್ಳುವುದು ಸಂಶಯಾಸ್ಪದ ಎಂಬ ವರದಿಯಿದೆ.
ಉತ್ತರಪ್ರದೇಶ ಚುನಾವಣಾ ಪ್ರಚಾರದಲ್ಲಿ ಪಕ್ಷದ ವರಿಷ್ಠ ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಮುರಳಿ ಮನೋಹರ ಜೋಶಿ ಮುಂತಾದವರು ಪಾಲ್ಗೊಳ್ಳಲ್ದ್ದಿದ್ದು ಯಾವುದೇ ಕಳಂಕಿತ ವ್ಯಕ್ತಿಗಳ ಪರ ಪ್ರಚಾರ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್ಗಡ ಮುಖ್ಯಮಂತ್ರಿ ರಮಣ್ ಸಿಂಗ್, ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಹಾಗೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಸುಶೀಲ್ ಮೋದಿ ಕೂಡಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜಸ್ತಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ರವಿಶಂಕರ್ ಪ್ರಸಾದ್, ಲೋಕಸಭಾ ಮಾಜಿ ಅಧ್ಯಕ್ಷ ಗೋಪಿನಾಥ್ ಮುಂಡೆ, ಮುಖ್ತಾರ್ ಅಬ್ಬಾಸ್ ನಖ್ವಿ, ಉಮಾ ಭಾರತಿ, ವರುಣ್ ಗಾಂಧಿ, ಶತ್ರುಘ್ನ ಸಿನ್ಹಾ, ಹೇಮಮಾಲಿನಿ ಮತ್ತಿತರ ಬಿಜೆಪಿ ಧುರೀಣರ ಹೆಸರು ಈ ಪಟ್ಟಿಯಲ್ಲಿದೆ.