ಗುಲ್ಬರ್ಗ: ಗುಲ್ಬರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ರೇವುನಾಯಕ್ ಎಲ್. ಬೆಳಮಗಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ಜಗತ್ವೃತ್ತದಿಂದ ಮಿನಿವಿಧಾನಸೌಧದವರೆಗೂ ತೆರೆದ ವಾಹನದಲ್ಲಿ ಮೆರವಣಿಗೆಯೊಂದಿಗೆ ಬಂದರು. ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು ಪಕ್ಷದ ಪರವಾಗಿ ಘೋಷಣೆಗಳನ್ನು ಕೂಗಿದರು.
ಲಂಬಾಣಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜಗತ್ವೃತ್ತದಿಂದ ರಂಗಮಂದಿರದುದ್ದಕ್ಕೂ ಕಾರ್ಯಕರ್ತರ ಸಾಲು ನೆರೆದಿತ್ತು.
ಮುಖ್ತರಸ್ತೆಯುದ್ದಕ್ಕೂ ಬಿಜೆಪಿ ಧ್ವಜಗಳು ಗೋಚರಿಸುತ್ತಿದ್ದವು. ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಳಮಗಿ ಅವರು, ‘ಗುಲ್ಬರ್ಗದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳು ತಮ್ಮಿಂದಲೇ ಆಗಿವೆ ಎಂದು ಖರ್ಗೆ ಹೇಳುತ್ತಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾಲಯ ರಾಜ್ಯ ಸರ್ಕಾರದಿಂದ ಆಗಿದೆ ಎನ್ನುವುದನ್ನು ಅವರು ಮರೆತಿದ್ದಾರೆ. ಎಲ್ಲಕ್ಕೂ ನಾ... ನಾ.. ಎಂದು ಖರ್ಗೆ ಹೇಳುತ್ತಿದ್ದಾರೆ. ಹೀಗೆ ಹೇಳಿಕೊಂಡು ಪ್ರತಿ ಸಲ ಜನರನ್ನು ಮೋಸ ಮಾಡಿ ಗೆದ್ದು ಬಂದಿದ್ದಾರೆ. ಈ ಬಾರಿ ಅವರಿಂದ ಜನರನ್ನು ಮೋಸಗೊಳಿಸುವುದು ಸಾಧ್ಯವಿಲ್ಲ’ ಎಂದರು.
‘ಮೋದಿ ಅವರು ಶ್ರೀಕೃಷ್ಣನ ಅವತಾರದಲ್ಲಿ ಬಂದಿದ್ದು, ದುಷ್ಟರ ಸಂಹಾರವಾಗುವುದು ಖಚಿತ. ಎಲ್ಲ ಕಡೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ನಾ.. ಎನ್ನುವವರಿಗೆ ಜನರು ಪಾಠ ಕಲಿಸುತ್ತಾರೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಬಿ. ಶಾಣಪ್ಪ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮಾಜಿ ಸಚಿವ ಸುನೀಲ ವಲ್ಲ್ಯಾಪುರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಪಾಟೀಲ, ಮುಖಂಡರಾದ ಬಿ.ಜಿ. ಪಾಟೀಲ್, ಶಶೀಲ್ ನಮೋಶಿ, ಎಂ.ವೈ. ಪಾಟೀಲ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಬೆಳಮಗಿ ಅವರೊಂದಿಗೆ ಜನರಿಗೆ ಕೈ ಬೀಸಿದರು.