ಬೆಂಗಳೂರು: ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರಲು ಆ ಪಕ್ಷದ ಕೆಲವು ಮುಖಂಡರು ನಡೆಸುತ್ತಿರುವ ಪ್ರಯತ್ನ ಮತ್ತು ಕೆಜೆಪಿ- ಬಿಜೆಪಿ ವಿಲೀನ ಕುರಿತು ಗುರುವಾರ ಇಲ್ಲಿ ನಡೆಯಲಿರುವ ಕೆಜೆಪಿ ಮುಖಂಡರ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಯಡಿಯೂರಪ್ಪ ಸಭೆ ಕರೆದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆತರಲು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದ ಗೌಡ ನಡೆಸುತ್ತಿರುವ ಪ್ರಯತ್ನ ದಿನದಿಂದ ದಿನಕ್ಕೆ ಬಲ ಪಡೆದುಕೊಳ್ಳುತ್ತಿದೆ.
ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರುವ ಅಗತ್ಯತೆ ಬಗ್ಗೆ ಸದಾನಂದ ಗೌಡ ನೇತೃತ್ವದ ನಿಯೋಗ, ಬಿಜೆಪಿ ವರಿಷ್ಠರ ಜೊತೆ ಈಗಾಗಲೇ ಮಾತುಕತೆ ನಡೆಸಿದೆ. ಈ ಪ್ರಯತ್ನಕ್ಕೆ ಪಕ್ಷದ ವರಿಷ್ಠರಿಂದ ಪೂರಕ ಪ್ರತಿಕ್ರಿಯೆ ದೊರೆತಿದೆ ಎಂದು ನಿಯೋಗದ ಸದಸ್ಯರೊಬ್ಬರು ತಿಳಿಸಿದ್ದಾರೆ.
`ಬಿಜೆಪಿಯಿಂದ ಅಧಿಕೃತ ಆಹ್ವಾನ ದೊರೆತ ನಂತರ ನಮ್ಮ ಪಕ್ಷ ಮುಂದಿನ ನಡೆ ಕುರಿತು ನಿರ್ಧಾರಿಸಲಿದೆ. ನನ್ನನ್ನು ಬಿಜೆಪಿಗೆ ಮರಳಿ ಸೇರ್ಪಡೆ ಮಾಡುವ ಬಗ್ಗೆ ಆ ಪಕ್ಷದ ಕೆಲವು ಮುಖಂಡರು ಪ್ರಯತ್ನಿಸಿದ್ದಾರೆ ಎಂಬ ವರದಿಗಳನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಅವರನ್ನು ತಡೆಯಲು ನನ್ನಿಂದ ಆಗದು. ಅದು ಬಿಜೆಪಿ ಆಂತರಿಕ ವಿಚಾರ. ಈ ಬಗ್ಗೆ ಪ್ರತಿಕ್ರಿಯೆ ನೀಡಲಾರೆ' ಎಂದು ಯಡಿಯೂರಪ್ಪ ಅವರು ಸುದ್ದಿಗಾರಿಗೆ ಬುಧವಾರ ಬೆಂಗಳೂರಿನಲ್ಲಿ ತಿಳಿಸಿದರು.
ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿಯ ಪ್ರಮುಖರ ಸಭೆಯಲ್ಲೂ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಬಿಜೆಪಿ ಕರ್ನಾಟಕ ಉಸ್ತುವಾರಿ ತಾವರ್ಚಂದ್ ಗೆಹ್ಲೋಟ್ ಅವರೂ ಪಾಲ್ಗೊಳ್ಳಲಿದ್ದಾರೆ.