ಪುತ್ತೂರು: `ರಾಜ್ಯದ ರಾಜಕೀಯ ಇತಿಹಾಸದಲ್ಲಿ ಬಿಜೆಪಿಯದ್ದು ಅತೀ ಕೆಟ್ಟ ಸರ್ಕಾರ. ಈ ಸರ್ಕಾರದ ಸಚಿವರು ಒಂದಲ್ಲಾ ಒಂದು ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದರೂ ಅವರ ವಿರುದ್ದ ಸೂಕ್ತ ನಿರ್ಧಾರ ಕೈಗೊಳ್ಳುವ ಶಕ್ತಿ ಹೈಕಮಾಂಡ್ಗೆ ಇಲ್ಲ~ ಎಂದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಲೇವಡಿ ಮಾಡಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸ್ಪೀಕರ್ ಅವರೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಆರೋಪಿ ಶಾಸಕರ ಪರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೃಧು ಧೋರಣೆ ತಳೆದಿದ್ದಾರೆ ಎಂದರು.
ಆರೋಗ್ಯ ತಪಾಸಣೆ: ಮಡಿಕೇರಿಯಲ್ಲಿ ಜೆಡಿಎಸ್ ಸಮಾವೇಶ ಮುಗಿಸಿ ಶನಿವಾರ ತಡರಾತ್ರಿ ಪುತ್ತೂರಿನ ಪ್ರವಾಸಿ ಮಂದಿರಕ್ಕೆ ಆಗಮಿಸಿದ ದೇವೇಗೌಡ ಅವರಿಗೆ ಮಂಡಿನೋವು ಕಾಣಿಸಿಕೊಂಡಿತ್ತು. ಅವರನ್ನು ಮಧ್ಯರಾತ್ರಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಲಾಯಿತು.