ಬಸವಕಲ್ಯಾಣ: ಇಲ್ಲಿನ ತಾಲ್ಲೂಕು ಪಂಚಾಯಿತಿ ಮೊದಲ ಅವಧಿಗೆ ಅಧ್ಯಕ್ಷರಾಗಿ ಏಕಲೂರ ಕ್ಷೇತ್ರದ ಗುರುಲಿಂಗಪ್ಪ ಸೈದಾಪುರೆ ಹಾಗೂ ಉಪಾಧ್ಯಕ್ಷರಾಗಿ ಸಸ್ತಾಪುರ ಕ್ಷೇತ್ರದ ಗೀತಾ ಅಂಬಾದಾಸ ಅವಿರೋಧ ಆಯ್ಕೆಯಾದರು. ತಾಪಂನ ಒಟ್ಟು 25 ರಲ್ಲಿ 16 ಸದಸ್ಯರು ಬಿಜೆಪಿ ಪಕ್ಷದವರಾಗಿದ್ದಾರೆ. ಹೀಗಾಗಿ ಈ ಪಕ್ಷದವರೇ ಅಧ್ಯಕ್ಷ ಉಪಾಧ್ಯಕ್ಷರಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದೆ.
ಬೇರೆ ಕ್ಷೇತ್ರಗಳ ಸದಸ್ಯರು ಸಹ ಈ ಸ್ಥಾನಗಳನ್ನು ಪಡೆದುಕೊಳ್ಳಲು ಪೈಪೋಟಿ ನಡೆಸಿದ್ದರಾದರೂ ಪಕ್ಷದ ಕೋರ ಕಮೀಟಿಯಿಂದ ಈ ಇಬ್ಬರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಹೀಗಾಗಿ ಈ ಇಬ್ಬರೇ ಇಂದು ನಾಮಪತ್ರ ಸಲ್ಲಿಸಿದ್ದರು. ಭರವಸೆ: ಆಯ್ಕೆ ನಂತರ ತಾಪಂ ಸಭಾಂಗಣದಲ್ಲಿ ಸನ್ಮಾನ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸಲಹೆ ಕೊಟ್ಟರು. ಕೆಲಸ ಕಾರ್ಯಗಳಿಗೆ ಅನುದಾನದ ಕೊರತೆಯಾದರೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ಕೊಟ್ಟರು.
ಪಕ್ಷದ ಜಿಲ್ಲಾ ಮುಖಂಡರಾದ ಶಿವರಾಜ ಗಂದಗೆ, ಶಿವಾಜಿರಾವ ಭೋಸಲೆ, ದೀಪಕ ಗಾಯಕವಾಡ, ತಾಲ್ಲೂಕು ಅಧ್ಯಕ್ಷ ಜಯದ್ರತ್ ಮಾಡ್ಜೆ, ಪ್ರಧಾನ ಕಾರ್ಯದರ್ಶಿ ಸುಧೀರ ಕಾಡಾದಿ, ಜಿಪಂ ಸದಸ್ಯ ಚಂದ್ರಶೇಖರ ಪಾಟೀಲ, ಪ್ರಮುಖರಾದ ರವಿ ಚಂದನಕೆರೆ, ಶಾಂತಕುಮಾರ ಹಾರಕೂಡೆ, ಶಿವಪುತ್ರ ಗೌರ, ಸಂಜೀವರೆಡ್ಡಿ ಯರಬಾಗ, ಬಾಲಾಜಿರೆಡ್ಡಿ ರಾಜೋಳಾ, ಸುಭಾಷ ರೇಕುಳಗಿ ಹಾಗೂ ಎಲ್ಲ ತಾಲ್ಲೂಕು ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.