ಬಳ್ಳಾರಿ: ‘ಬಿಜೆಪಿ ನಮ್ಮ ಮಾತೃ ಪಕ್ಷವಾಗಿದ್ದು, ಸಹಜವಾಗಿಯೇ ಆ ಪಕ್ಷದತ್ತ ಒಲವು ಇದೆ’ ಎಂದು ಬಿಎಸ್ಆರ್ ಕಾಂಗ್ರೆಸ್ ಮುಖಂಡ ಜಿ.ಸೋಮಶೇಖರ ರೆಡ್ಡಿ ತಿಳಿಸಿದರು.
ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ಭಾನುವಾರ ಬೆಳಿಗ್ಗೆ ಲೋಹ ಸಂಗ್ರಹಣಾ ಸಮಿತಿಯು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಿದ್ದ ಏಕತಾ ಓಟದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಮೂಲಕ, ಬಿಎಸ್ಆರ್ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗುವ ಸೂಚನೆ ನೀಡಿದರು. ಅಲ್ಲದೇ, ನರೇಂದ್ರ ಮೋದಿ ದೇಶದ ಪ್ರಧಾನಿ ಆಗುವುದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
‘ರಾಷ್ಟ್ರದ ಏಕತೆಯ ದೃಷ್ಟಿಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂಬ ಆಶಯ ನಮ್ಮದು. ಈ ಗುರಿ ಮುಟ್ಟಲು ಬಳ್ಳಾರಿ ಸೇರಿದಂತೆ ರಾಜ್ಯದಾದ್ಯಂತ ಶ್ರಮಿಸುತ್ತೇವೆ’ ಎಂದು ಅವರು ಹೇಳಿದರು.
‘ಬಿಜೆಪಿಯತ್ತ ಸದಾ ಒಲವು ಇದೆ. ಆ ಪಕ್ಷದೊಂದಿಗೆ ವಿಲೀನವಾಗುವ ಕುರಿತು ಬಿಎಸ್ಆರ್ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಿ.ಶ್ರೀರಾಮುಲು ಮಾತುಕತೆ ನಡೆಸಿದ್ದಾರೆ. ಅವರ ನಿರ್ಧಾರವೇ ಅಂತಿಮ’ ಎಂದು ಅವರು ತಿಳಿಸಿದರು.