ರಾಮನಗರ: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಆದರೆ ಅವರನ್ನು ದುಷ್ಟಶಕ್ತಿಗಳು ತಡೆಯುತ್ತಿವೆ ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಶಂಕರಲಿಂಗೇಗೌಡ ದೂರಿದರು.
ಬುಧವಾರ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಚಹಾ ಸೇವನೆಗಾಗಿ ರಾಮನಗರದ ಹೋಟೆಲ್ವೊಂದಕ್ಕೆ ಬಂದಿದ್ದ ಅವರು ಸ್ಥಳೀಯರಿಂದ ಸನ್ಮಾನ ಸ್ವೀಕರಿಸಿ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಬಿಜೆಪಿಯ ವರಿಷ್ಠರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಅವರು ಪಕ್ಷವನ್ನು ಕಟ್ಟಿಬೆಳೆಸಿದ್ದರೆ. ಆದರೆ ಇಂದು ಆ ಪಕ್ಷಕ್ಕೆ ಹಾವು, ಚೇಳುಗಳು ನುಸುಳಿವೆ ಎಂದು ಅವರು ಕಿಡಿಕಾರಿದರು.
ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಬೆಲೆಯಿಲ್ಲದಂತಾಗಿದೆ ಎಂದ ಅವರು, `ನಾನು ಈಗ ಬಿಜೆಪಿಯಲ್ಲೇ ಇದ್ದೇನೆ, ಮುಂದಿನ ಚುನಾವಣೆ ವೇಳೆಗೆ ಕಾರ್ಯಕರ್ತರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುತ್ತೇನೆ~ ಎಂದು ಅವರು ಪ್ರತಿಕ್ರಿಯಿಸಿದರು.
`ನಾನು ಪ್ರಬಲ ಕೋಮಿನ ನಾಯಕನಾಗಿ ನಾಲ್ಕು ಬಾರಿ ಶಾಸಕನಾಗಿದ್ದರೂ ಕೂಡ ನನಗೆ ಯಾವುದೇ ಮಂತ್ರಿ ಪದವಿ ನೀಡದೆ ಬಿಜೆಪಿ ಪಕ್ಷ ಕಡೆಗಣಿಸಿದೆ. ನಾನು ರಾಜ್ಯ ಕಂಡ ಹಲವಾರು ಮುಖ್ಯ ಮಂತ್ರಿಗಳ ಜೊತೆ ಒಡನಾಟ ಹೊಂದಿ ರಾಜಕೀಯ ಅನುಭವ ಪಡೆದಿದ್ದೇನೆ. ಆದರೂ ಪಕ್ಷ ನನ್ನನ್ನು ನಿರ್ಲಕ್ಷಿಸಿದೆ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಇಪ್ಪತ್ತು ತಿಂಗಳು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಎಚ್.ಡಿ.ಕುಮಾರಸ್ವಾಮಿ ಒಳ್ಳೆಯ ಆಡಳಿತ ನೀಡಿದ್ದರು. ಮುಂದೆಯೂ ಅವರಿಗೆ ಉತ್ತಮ ಭವಿಷ್ಯ ಇದೆ ಎಂದರು.
ಸ್ಥಳೀಯ ಮುಖಂಡರಾದ ಹನುಮಂತೇಗೌಡ, ವೆಂಕಟೇಶ್, ಹೋಟೆಲ್ ಸ್ವಾಮಿ, ರೇವಣ್ಣ, ಶಿವರಾಜು, ಶಿವಸ್ವಾಮಿ, ಬಿ.ಜಯರಾಮ್, ಶೇಖರ್ ಶಿವಲಿಂಗಯ್ಯ, ಮಹದೇವಯ್ಯ ಉಪಸ್ಥಿತರಿದ್ದರು.