ನವದೆಹಲಿ (ಪಿಟಿಐ): 2ಜಿ ಹಗರಣದ ತನಿಖೆ ನಡೆಸುತ್ತಿರುವ ಸಂಸತ್ತಿನ ಜಂಟಿ ಸಮಿತಿ ಎದುರು ಸಾಕ್ಷಿ ಹೇಳಲು ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಕರೆಯಿಸಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸುತ್ತಿ ರುವುದು ಕಾರ್ಪೊರೇಟ್ ಪ್ರಮುಖರನ್ನು ರಕ್ಷಿಸುವ ಹುನ್ನಾರ ಎಂದು ಕಾಂಗ್ರೆಸ್ ಟೀಕಿಸಿದೆ.
1998ರಿಂದ 2009ರ ವರೆಗಿನ ತರಂಗಾಂತರ ಹಂಚಿಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಾಹಕರು (ಸಚಿವರು) ಮತ್ತು ನಿಯಂತ್ರಕರು (ಅಧಿಕಾರಿಗಳು) ವಿಚಾರಣೆಗೆ ಒಳಗಾಗಿದ್ದಾರೆ. ಆದರೆ ಕಾರ್ಪೊರೇಟ್ ಪ್ರಮುಖರನ್ನು ಈ ವಿಚಾರದಲ್ಲಿ ಮುಟ್ಟಿಯೇ ಇಲ್ಲ ಎಂದು ಕಾಂಗ್ರೆಸ್ ವಕ್ತಾರ ಮನಿಷ್ ತಿವಾರಿ ಹೇಳಿದ್ದಾರೆ.
ಜೆಪಿಸಿಯ ಕಳೆದ ಸಭೆಯಲ್ಲಿ ತಿವಾರಿ ಅವರು ನೀರಾ ರಾಡಿಯಾ ಅವರ ದೂರವಾಣಿ ಸಂಭಾಷಣೆಯ ಧ್ವನಿಮುದ್ರಿಕೆಯನ್ನು ಹಾಜರುಪಡಿಸುವಂತೆ ಸೂಚಿಸಬೇಕು ಎಂದು ಒತ್ತಾಯಿಸ್ದ್ದಿದರು.
ಈ ಧ್ವನಿಮುದ್ರಿಕೆ ಆಲಿಸುವುದರಿಂದ ರಾಜಕಾರಣಿಗಳು ಮತ್ತು ಕಾರ್ಪೊರೇಟ್ ಪ್ರಮುಖರ ಮಧ್ಯೆಯ ಸಂಬಂಧ ಏನು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದರು.
1992ರ ಷೇರು ಮಾರುಕಟ್ಟೆ ಹಗರಣವನ್ನು ವಿಚಾರಣೆ ನಡೆಸಿದ ಜಂಟಿ ಸಮಿತಿಯು ಸಚಿವರನ್ನು ಸಾಕ್ಷಿ ಹೇಳಲು ಕರೆಯಿಸಿತ್ತು. ಆದ್ದರಿಂದ ಈಗಲೂ ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಕರೆಯಿಸುವುದರಲ್ಲಿ ತಪ್ಪಿಲ್ಲ ಎಂದು ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ಅವರು ಜೆಪಿಸಿ ಅಧ್ಯಕ್ಷ ಚಾಕೊ ಅವರಿಗೆ ಪತ್ರ ಬರೆದಿರುವುದನ್ನು ಪ್ರಸ್ತಾಪಿಸಿರುವ ತಿವಾರಿ, 1998ರಿಂದ ಯಾರ್ಯಾರು ಹನಕಾಸು ಮತ್ತು ದೂರಸಂಪರ್ಕ ಖಾತೆಯ ಸಚಿವರಾಗಿದ್ದರೋ ಅವರೆಲ್ಲರನ್ನೂ ಸಾಕ್ಷಿಗೆ ಕರೆಯಿಸಬೇಕಾಗುತ್ತದೆ, ಆಗ ಸಿನ್ಹಾ ಅವರು ಸಮಿತಿಯ ಸದಸ್ಯರಾಗಿದ್ದುಕೊಂಡೇ ಸಾಕ್ಷಿ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.