ಪುತ್ತೂರು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಆರೋಪಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿರುವ ಬಗ್ಗೆ ಬಿಜೆಪಿ ವರಿಷ್ಠರೇ ಚಿಂತನೆ ನಡೆಸಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಭಿಪ್ರಾಯಪಟ್ಟಿದೆ.
ಇಲ್ಲಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಪ್ರಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಆರ್ಎಸ್ಎಸ್ನ ಅಖಿಲ ಭಾರತ ಪ್ರತಿನಿಧಿ ಸಭಾ- 2011ರ ಕಲಾಪಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಸಂಘದ ಸಹಕಾರ್ಯವಾಹ ಸುರೇಶ್ ಜೋಷಿ, ‘ಬಿಜೆಪಿ ಆರ್ಎಸ್ಎಸ್ನ ರಾಜಕೀಯ ಅಂಗಸಂಸ್ಥೆಯೇನಲ್ಲ. ಆದರೆ ಎರಡೂ ಸಂಸ್ಥೆಗಳ ಮೂಲ ವಿಚಾರಧಾರೆ ಒಂದೇ ಆಗಿದೆ. ಒಂದು ರಾಜಕೀಯ ಪಕ್ಷವಾಗಿ ಅದರ ನಿಲುವುಗಳು ಭಿನ್ನವಾಗಿ ಇರಬಹುದು. ಆದರೆ ಎಲ್ಲರೂ ವಿಚಾರಧಾರೆಗೆ ಬದ್ಧರಾಗಿರಬೇಕು. ಎಲ್ಲವೂ ಸಮರ್ಪಕವಾಗಿರಬೇಕು ಎಂದು ಆರ್ಎಸ್ಎಸ್ ನಿರೀಕ್ಷಿಸುತ್ತದೆ’ ಎಂದು ಸ್ಪಷ್ಟಪಡಿಸಿದರು. ‘ವ್ಯವಸ್ಥೆ ವಿಶ್ವಾಸಾರ್ಹತೆ ಉಳಿಸುವುದು ನಮ್ಮ ಮುಂದಿನ ಸವಾಲು. ತಪ್ಪು ನಡೆಯುತ್ತಿದ್ದರೆ ಅದನ್ನು ಸರಿಪಡಿಸಬೇಕು ಎಂಬುದು ಸಂಘದ ಆಶಯ.