ರಾಯಚೂರು: ಒಂದೇ ತಳಿ ಬಿತ್ತನೆ ಬೀಜಕ್ಕೆ ಗಂಟು ಬೀಳಬೇಡಿ. ರಾಜ್ಯದಲ್ಲಿ ಎಲ್ಲ ಕಡೆಗೂ ಕನಕ.. ಕನಕ... ಎಂದು ಬಿ.ಟಿ.-ಕನಕ ಹತ್ತಿ ಬೀಜಕ್ಕೆ ಮುಗಿಬಿದ್ದಿರುವುದು ಅಚ್ಚರಿಯಾಗಿದೆ. ಕೃಷಿ ವಿವಿಯ ಕೃಷಿ ತಜ್ಞರು, ಸಂಶೋಧಕರ ತಂಡದ ಪರಿಶೀಲನಾ ವರದಿ ಪ್ರಕಾರ `ಬಿಟಿ-ಕನಕ~ ತಳಿ ಹತ್ತಿ ಬೀಜ 13ನೇ ಸ್ಥಾನದಲ್ಲಿದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ ಪಾಟೀಲ್ ಹೇಳಿದರು.
ಕೃಷಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಬೀಜ ಘಟಕವು ಆಯೋಜಿಸಿದ್ದ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ವಿವಿಧ ಹತ್ತಿ ತಳಿಯ ಬೆಳೆಗಳ ಬಗ್ಗೆ ಕೃಷಿ ವಿವಿ ತಜ್ಞರು, ಸಂಶೋಧಕರು ರಾಜ್ಯವ್ಯಾಪಿ ಅಧ್ಯಯನ ನಡೆಸಿದ್ದಾರೆ.
ತಜ್ಞರ ವರದಿ ಪ್ರಕಾರ ಬಿ.ಟಿ.-ಕನಕ ತಳಿ ಹತ್ತಿ ಬೀಜಕ್ಕೆ 13ನೇ ಸ್ಥಾನ ದೊರಕಿದೆ. ಇದರ ಅರ್ಥ ಕನಕ-ತಳಿ ಉತ್ತಮ ತಳಿ ಬೀಜ ಅಲ್ಲ ಎಂಬುದಲ್ಲ. ಬದಲಾಗಿ ಅದಕ್ಕಿಂತ ಉತ್ತಮವಾದ 12 ತಳಿಗಳು ಇವೆ. ಅಜಿತ್, ಸುದರ್ಶನ, ಬನ್ನಿ ಗೋಲ್ಡ್, ಜಾಕ್ಪಾಟ್ ಹೀಗೆ ಅನೇಕ ತಳಿಗಳನ್ನು ಉದಾಹರಿಸಬಹುದು. ಇಂಥ ಬೇರೆ ತಳಿ ಬೀಜ ಬಿತ್ತನೆ ಮಾಡಿದರೆ ಇಳುವರಿ ಕಡಿಮೆ ಆಗುವುದಿಲ್ಲ. ಆರೈಕೆ ಉತ್ತಮವಾಗಿರಬೇಕಷ್ಟೇ ಎಂದರು.