ಧಾರವಾಡ: ಬಿಟಿ ಬದನೆ ಬೀಜ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಕರಾರು ಉಲ್ಲಂಘನೆ ಆರೋಪದಡಿ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಕ್ರಿಮಿನಲ್ ಪ್ರಕರಣದಲ್ಲಿ ಕೃಷಿ ವಿಶ್ವವಿದ್ಯಾಲಯ ಅಂದಿನ ಕುಲಪತಿಗಳಾದ ಡಾ.ಎಸ್.ಎ.ಪಾಟೀಲ, ಡಾ.ಆರ್.ಆರ್.ಹಂಚಿನಾಳ ಮತ್ತು ಪ್ರಭಾರ ಕುಲಪತಿ ಡಾ.ಎಚ್.ಎಸ್.ವಿಜಯಕುಮಾರ ಸೋಮವಾರ ನ್ಯಾಯಾಲಯದಲ್ಲಿ ಹಾಜರಾದರು.
ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಎಬಿಪಿಎಸ್ ಯೋಜನೆಯಡಿ ಬಿಟಿ ಬದನೆ ಬೀಜ, ತಳಿ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುಮತಿ ನೀಡಿತ್ತು. 2005ರಲ್ಲಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಮಹಿಕೋ ಮತ್ತು ಸದ್ಗುರು ಮ್ಯಾನೇಜ್ಮೆಂಟ್ ಕನ್ಸಲ್ಟಂಟ್ ಲಿ. ಜೊತೆ ಒಡಂಬಡಿಕೆಗೆ ಸಹಿ ಹಾಕಿತ್ತು. ಕೆಲಸವೂ ನಡೆದಿತ್ತು.
ಕೃಷಿ ವಿಶ್ವವಿದ್ಯಾಲಯ ಒಡಂಬಡಿಕೆ ಉಲ್ಲಂಘನೆ ಮಾಡಿದೆ. ಜೀವ ವೈವಿಧ್ಯ ಕಾಯ್ದೆ 2002ರ ಕಲಂ ಕಾಯ್ದೆ ಮೂರು ಮತ್ತು ನಾಲ್ಕನ್ನು ಉಲ್ಲಂಘಿಸಿದೆ ಎಂದು 2012 ನವೆಂಬರ್ 24ರಂದು ರಾಷ್ಟ್ರೀಯ ಜೈವಿಕ ವೈವಿಧ್ಯ ಪ್ರಾಧಿಕಾರ, ಕೃಷಿ ವಿಶ್ವವಿದ್ಯಾಲಯ, ಅಂದಿನ ಕುಲಪತಿ ಮತ್ತು ಇತರರ ವಿರುದ್ಧ ಖಾಸಗಿ ದೂರು ದಾಖಲಿಸಿತ್ತು. ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ವಿಚಾರಣಾ ಪ್ರಕ್ರಿಯೆ ಅನೂರ್ಜಿತಗೊಳಿಸುವಂತೆ ಕೋರಿ ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಜಾಗೊಂಡಿತ್ತು.
ಈ ಮಧ್ಯೆ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದ ಆರೋಪಿಗಳು ಸೋಮವಾರ ನ್ಯಾಯಾಲಯದ ಮುಂದೆ ಹಾಜರಾಗಿ ಆರೋಪಿಗಳು ಜಾಮೀನು ಷರತ್ತುಗಳನ್ನು ಪೂರೈಸಿದರು. ಅದನ್ನು ಸ್ವೀಕರಿಸಿದ ನ್ಯಾಯಾಲಯ ಉಳಿದ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ ಆದೇಶ ಹೊರಡಿಸಿತು.