ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುಗಡೆಗೆ ಕೈದಿಗಳ ಮನವಿ

Last Updated 24 ಮಾರ್ಚ್ 2011, 9:00 IST
ಅಕ್ಷರ ಗಾತ್ರ

ಬಳ್ಳಾರಿ: ಜೀವಾವಧಿ ಶಿಕ್ಷೆಗೊಳಗಾಗಿ 8ರಿಂದ 12 ವರ್ಷದ ಶಿಕ್ಷೆ ಪೂರೈಸಿರುವ ತಮ್ಮನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಿ, ಪರಿವರ್ತನೆಗೂ, ಹೊಸ ಜೀವನ ಆರಂಭಿಸಲೂ ಅವಕಾಶ ಕಲ್ಪಿಸಬೇಕು ಎಂದು 30ಕ್ಕೂ ಅಧಿಕ ಕೈದಿಗಳು ಮನವಿ ಮಾಡಿದರು.

ಸಮಾಜಕಲ್ಯಾಣ ಹಾಗೂ ಬಂದೀಖಾನೆ ಖಾತೆ ಸಚಿವ ಎ.ನಾರಾಯಣ ಸ್ವಾಮಿ ಬುಧವಾರ ಬೆಳಿಗ್ಗೆ ನಗರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಸಂದರ್ಭ ಅವರು ಈ ಕುರಿತ ಮನವಿ ಪತ್ರವನ್ನು ನೀಡಿದರು.

ಅಪರಾಧ ಮನೋಭಾವ ತ್ಯಜಿಸಿ, ಹೊಸಜೀವನ ನಡೆಸಲು ಈ ಹಿಂದೆಯೂ ಅನೇಕ ಬಾರಿ 8-10 ವರ್ಷ ಶಿಕ್ಷೆ ಪೂರೈಸಿದ ಸನ್ನಡತೆಯ ಕೈದಿಗಳ ಬಿಡುಗಡೆಗೆ ಸರಕಾರಗಳು ಅವಕಾಶ ಕಲ್ಪಿಸಿವೆ. ಆದರೆ, ಕಳೆದ ಐದು ವರ್ಷಗಳಿಂದ ಯಾವುದೇ ಕೈದಿಯನ್ನೂ ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡ ಲಾಗಿಲ್ಲ. ಈ ಬಗ್ಗೆ ವಿವರವಾದ ಮಾಹಿತಿಯನ್ನು ರಾಜ್ಯಪಾಲರಿಗೆ ನೀಡಿ, ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರ ಮುಖೇನ ಮನವಿ ಮಾಡಿದರು.

ಬಂದೀಖಾನೆ ಅಧಿಕಾರಿಗಳು ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಒಟ್ಟು 200ಕ್ಕೂ ಅಧಿಕ ಸನ್ನಡತೆಯ ಕೈದಿಗಳ ಪಟ್ಟಿಯನ್ನು  ರಾಜ್ಯ ಪಾಲರಿಗೆ ನೀಡಿದೆ. ಆದರೆ, ರಾಜ್ಯಪಾಲರು ಕೈದಿಗಳ ವಿವರ, ಅವರು ಮಾಡಿದ ಅಪರಾಧ, ಸನ್ನಡತೆಯ ಸ್ವರೂಪಗಳನ್ನು ನೀಡುವಂತೆ ಕೋರಿದ್ದು, ಅದನ್ನೂ ಒದಗಿಸಲಾಗಿದೆ. ಬರುವ ಸ್ವಾತಂತ್ರ್ಯೋತ್ಸವದ ವೇಳೆಗೆ ಎಲ್ಲ ಸನ್ನಡತೆ ಕೈದಿಗಳ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಸರಕಾರದ ಪರ ತಾವು ಮತ್ತೊಮ್ಮೆ ರಾಜ್ಯಪಾಲ ರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಶಾಸಕ ಜಿ.ಸೋಮಶೇಖರರೆಡ್ಡಿ, ಉಪಮೇಯರ್ ಶಶಿಕಲಾ, ಮಾಜಿ ಮೇಯರ್ ಬಸವರಾಜ್, ಬಂದೀಖಾನೆ ಇಲಾಖೆ ಅಧಿಕಾರಿ ಶ್ರೀನಿವಾಸ್, ಕಾರಾಗೃಹದ ಅಧೀಕ್ಷಕ ಆನಂದ ರೆಡ್ಡಿ ಉಪಸ್ಥಿತರಿದ್ದರು.

ಕನ್ನಡ ಸೇನೆಗೆ ಆಯ್ಕೆ
ಬಳ್ಳಾರಿ: ಕನ್ನಡ ಸೇನೆ ಕರ್ನಾಟಕ ಸಂಘದ ಬಳ್ಳಾರಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಜೆ.ಎಸ್.ಶ್ರೀನಿವಾಸಲು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT