ಗೋಣಿಕೊಪ್ಪಲು: ಮುಂಗಾರು ಮಳೆ ಆರಂಭಗೊಂಡು 15 ದಿನ ಕಳೆದರೂ ಕೃಷಿ ಕಾರ್ಯ ಕೈಗೊಳ್ಳಲು ಬಿತ್ತನೆ ಬೀಜ ಲಭಿಸುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ಮಂಗಳವಾರ ತಾ.ಪಂ.ಪ್ರಗತಿ ಪರಿಶೀಲನಾ ಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಎಚ್.ಕೆ.ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದ್ದಾಗ ಶ್ರೀಮಂಗಲ ಭಾಗದ ರೈತರು ಏಕಾಏಕಿ ಸಭೆಗೆ ನುಗ್ಗಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಇದರಿಂದ ತಬ್ಬಿಬ್ಬಾದ ಅಧ್ಯಕ್ಷ ದಿನೇಶ್ ಹಾಗೂ ಸದಸ್ಯರು ಕೆಲಕಾಲ ಮೌನ ವಹಿಸಿದರು.
ಪ್ರತಿಭನಟನಾ ನಿರತ ರೈತರು ಕೃಷಿ ಅಧಿಕಾರಿ ಸಾಹುಕಯ್ಯ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು. ತುಂಗ ಮತ್ತು ಅತಿರ ಭತ್ತದ ತಳಿಯ ಬಿತ್ತನೆ ಬೀಜ ಬಂದಿದ್ದರೂ ಕಳೆದ 20 ದಿನಗಳಿಂದ ರೈತರಿಗೆ ನೀಡದೆ ಅಧಿಕಾರಿ ಸತಾಯಿಸುತ್ತಿದ್ದಾರೆ. ಇದರ ಬಗ್ಗೆ ತಾ.ಪಂ.ಅಧ್ಯಕ್ಷರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಇದಕ್ಕೆ ತಕ್ಷಣ ಸ್ಪಂದಿಸಿದ ಅಧ್ಯಕ್ಷ ದಿನೇಶ್ ಅವರು ಕೂಡಲೇ ಅಧಿಕಾರಿಯನ್ನು ಸಭೆಯಿಂದ ಕಚೇರಿಗೆ ಕಳಿಸಿ ಬಿತ್ತನೆ ಬೀಜ ವಿತರಿಸುವಂತೆ ಸೂಚಿಸಿದರು. ಉಪಾಧ್ಯಕ್ಷೆ ಧರಣಿ ಕಟ್ಟಿ ಹಾಜರಿದ್ದರು.