ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್: ಹೊಸ ಮಾನದಂಡ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಯೋಜನಾ ಆಯೋಗದ ಸಮಿತಿಯು `ಬಡತನ~ ಶಬ್ದದ ಮರುವ್ಯಾಖ್ಯಾನ ಮಾಡಿರುವುದರಿಂದ, ಇನ್ನು ಮುಂದೆ ನಗರದಲ್ಲಿ ಐವರು ಸದಸ್ಯರನ್ನು ಹೊಂದಿರುವ ಕುಟುಂಬ ಪ್ರತಿದಿನ ಆಹಾರ ಮತ್ತಿತರ ಪದಾರ್ಥಗಳಿಗೆ 161 ರೂಪಾಯಿಗಿಂತ ಹೆಚ್ಚು ವ್ಯಯ ಮಾಡಿದರೆ ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎ) ನೀಡಲಾಗುವ ಸೌಲಭ್ಯಗಳಿಂದ ವಂಚಿತವಾಗಬೇಕಾಗುತ್ತದೆ.

ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಐವರು ಸದಸ್ಯರ ಕುಟುಂಬವು ಪ್ರತಿ ದಿನ ಆಹಾರ ಪದಾರ್ಥಗಳಿಗೆ 130 ರೂಪಾಯಿಗಿಂತ ಹೆಚ್ಚು ಖರ್ಚು ಮಾಡುತ್ತಿದ್ದರೆ ಅಂತಹ ಕುಟುಂಬವನ್ನು ಬಿಪಿಎಲ್ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ಇದರಿಂದ ಬಿಪಿಎಲ್ ವ್ಯಾಪ್ತಿಗೆ ಇದುವರೆಗೆ ಸೇರಿದ್ದ ಕುಟುಂಬಗಳ ಸಂಖ್ಯೆ  ಕಡಿಮೆಯಾಗಲಿದೆ.

2011ರ ಜೂನ್‌ವರೆಗಿನ ಸೂಚ್ಯಂಕದ ಪ್ರಕಾರ ನಗರ ಪ್ರದೇಶಗಳಲ್ಲಿ ಕುಟುಂಬದ ಆದಾಯವು ತಿಂಗಳಿಗೆ 4,824 ರೂಪಾಯಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 3,905 ರೂಪಾಯಿ ಇದ್ದರೆ ಬಡತನ ರೇಖೆಗಿಂತ ಕೆಳಗಿನವರ ವರ್ಗಕ್ಕೆ ಸೇರುವುದಿಲ್ಲ ಎಂದು ಸಮಿತಿಯು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಬಡತನ ರೇಖೆಗಿಂತ ಕೆಳಗಿನವರು ಎಂದು ನಿರ್ಧರಿಸಲು ಹೊಸ ಮಾನದಂಡವನ್ನು ಅನುಸರಿಸಲಾಗಿದ್ದು, ನಗರ ಪ್ರದೇಶದಲ್ಲಿ ತಲಾ ತಿಂಗಳ ಆದಾಯ 965 ರೂಪಾಯಿ ಮತ್ತು ಗ್ರಾಮೀಣ ಪ್ರದೇಶದಲ್ಲಿ 781 ರೂಪಾಯಿ ಎಂದು ನಿಗದಿಪಡಿಸಲಾಗಿದೆ.

ನಗರ ಪ್ರದೇಶದ ಒಬ್ಬ ವ್ಯಕ್ತಿ 32 ರೂಪಾಯಿಗಿಂತ ಕಡಿಮೆ ಆಹಾರ ಪದಾರ್ಥ ಸೇವಿಸಿದರೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 26 ರೂಪಾಯಿಗಿಂತ ಕಡಿಮೆ ಆಹಾರ ಪದಾರ್ಥ ಬಳಸಿದರೆ ಬಿಪಿಎಲ್ ಸೌಲಭ್ಯಕ್ಕೆ ಅರ್ಹನಾಗುತ್ತಾನೆ. 2005ರ ಮಾರ್ಚ್ 1ರವರೆಗೆ  ದೇಶದಲ್ಲಿ 40.74 ಕೋಟಿ ಜನ ಬಡತನ ರೇಖೆಗಿಂತ ಕೆಳಗಿನವರಾಗಿದ್ದರು. 2011ರಲ್ಲಿ ಭಾರತದ ಜನಸಂಖ್ಯೆ 121 ಕೋಟಿಗೆ ಏರಿದೆ ಎಂದು  ಕೋರ್ಟ್‌ಗೆ ತಿಳಿಸಲಾಗಿದೆ.

ಬಡತನದ ಮಾನದಂಡ ಅಳೆಯಲು ತೆಂಡೂಲ್ಕರ್ ಸಮಿತಿಯು ಹೊಸ ವಿಧಾನವನ್ನು ಅಳವಡಿಸಿದ್ದು ಆರೋಗ್ಯ, ಶಿಕ್ಷಣದ ವೆಚ್ಚ ಮತ್ತು ಪೌಷ್ಟಿಕ ಆಹಾರಗಳ ಬಳಕೆಯನ್ನು ಪರಿಗಣಿಸಿದೆ.

ಬಡವರಿಗೆ ದ್ರೋಹ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವ್ಯಕ್ತಿಯ ಆದಾಯ ಕ್ರಮವಾಗಿ ದಿನಕ್ಕೆ 32 ಮತ್ತು 26 ರೂಪಾಯಿಗಳಿದ್ದರೆ ಅಂತಹ ವ್ಯಕ್ತಿಯನ್ನು ಬಿಪಿಎಲ್ ಸೌಲಭ್ಯಗಳಿಂದ ದೂರವಿಡುವ ಯೋಜನಾ ಆಯೋಗದ ಪ್ರಸ್ತಾವ ಬಡವರಿಗೆ ಮಾಡಿದ ಅವಮಾನ ಮತ್ತು ದ್ರೋಹ ಎಂದು ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT