ಬೆಂಗಳೂರು: `ಬಿಬಿಎಂಪಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಆ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿದೆ~ ಎಂದು ಉಪ ಮೇಯರ್ ಎಸ್.ಹರೀಶ್ ಹೇಳಿದರು.
ನಗರದಲ್ಲಿ ಇತ್ತೀಚೆಗೆ ನಡೆದ ಶಾರದಾ ವಿದ್ಯಾನಿಕೇತನದ ಸಂಗೀತ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಶಾಸಕರ ಶಿಫಾರಸ್ಸು ಪತ್ರಗಳನ್ನು ತರುವುದನ್ನು ನೋಡಿದರೆ ಪಾಲಿಕೆಯ ವಿದ್ಯಾಸಂಸ್ಥೆಗಳ ಮಹತ್ವ ತಿಳಿಯುತ್ತದೆ~ ಎಂದರು.
ಶಾರದಾ ವಿದ್ಯಾನಿಕೇತನದ ಕಾರ್ಯದರ್ಶಿ ವೈ.ಎನ್.ಶರ್ಮ, `ಮಕ್ಕಳಲ್ಲಿ ಸುಪ್ತವಾಗಿರುವ ಸಂಗೀತ ಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಯನ್ನು ಹೊರತರುವುದು ಮುಖ್ಯ. ಮಕ್ಕಳ ಸಂಗೀತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಾರದಾ ವಿದ್ಯಾನಿಕೇತನ ಕಳೆದ 18 ವರ್ಷಗಳಿಂದ ಮಾಡುತ್ತಾ ಬಂದಿದೆ. ಸಂಸ್ಥೆ ಯಾವುದೇ ಡೊನೇಷನ್ ಪಡೆಯದೇ ಹಾಗೂ ಮಕ್ಕಳಿಗೆ ಒತ್ತಡವಿಲ್ಲದ ರೀತಿಯಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ಕಲಿಸುತ್ತಿದೆ~ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸಂಗೀತ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ವಿದ್ವಾನ್ ಬಿ.ಕೆ.ಅನಂತರಾಮ್ ಮತ್ತು ತಂಡದವರು ಕೊಳಲು ವಾದನ ಪ್ರಸ್ತುತ ಪಡಿಸಿದರು. ಸಂಸ್ಥೆಯ ಬಿ.ಆರ್.ರವೀಂದ್ರನಾಥ್, ಶ್ರೀ ವಾಣಿ ವಿದ್ಯಾಕೇಂದ್ರದ ಅಧ್ಯಕ್ಷ ಶ್ಯಾಮಸುಂದರ ಶರ್ಮ ಮತ್ತಿತರರು ಉಪಸ್ಥಿತರಿದ್ದರು.