ಹಿರಿಯೂರು: ತಾಲ್ಲೂಕಿನ ಆದಿವಾಲ ಭೋವಿಕಾಲೊನಿಯ ಕರಿಬಸಪ್ಪ ಎನ್ನುವವರ ಎರಡು ಎಕರೆಯಲ್ಲಿನ ಕಟಾವಿಗೆ ಬಂದಿದ್ದ ಬಾಳೆ ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ನೆಲಕ್ಕೆ ಉರುಳಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಎರಡು ಎಕರೆಯಲ್ಲಿ 1200 ಬಾಳೆ ಕಂದುಗಳಿದ್ದು, 20-25 ದಿನದಲ್ಲಿ ಕಟಾವು ಮಾಡಬೇಕಿತ್ತು. ಕೊಳವೆಬಾವಿ ನೀರಿಗೆ ಹಾಕಿದ್ದ ಬಾಳೆಯ ಫಸಲು ಹುಲುಸಾಗಿ ಬಂದಿತ್ತು. ಕೇವಲ 50 ಗೊನೆಗಳನ್ನು ಕಟಾವು ಮಾಡಲಾಗಿತ್ತು. ಒಂದೊಂದು ಗೊನೆ 30 ಕೆ.ಜಿ. ತೂಗುತ್ತಿದ್ದವು.
ಈ ಭಾಗದ ರೈತರೆಲ್ಲ ತೋಟಕ್ಕೆ ಬಂದು ಬಾಳೆ ಫಸಲನ್ನು ನೋಡಿ ಮೆಚ್ಚುಗೆ ಸೂಚಿಸಿದ್ದರು. ಬಿರುಗಾಳಿಯಿಂದ ಸುಮಾರು ರೂ ಮೂರು ಲಕ್ಷಕ್ಕೂ ಹೆಚ್ಚು ನಷ್ಟಸಂಭವಿಸಿದೆ ಎಂದು ಕರಿಬಸಪ್ಪ ತಿಳಿಸಿದ್ದಾರೆ.
ನೆರವಿಗೆ ಮೊರೆ: ಐದು ಎಕರೆ ಭೂಮಿ ಹೊಂದಿರುವ ಕರಿಬಸಪ್ಪ ನೀರಿನ ಕೊರತೆಯಿಂದ ಕೇವಲ ಎರಡು ಎಕರೆಗೆ ಬಾಳೆ ಹಾಕಿದ್ದರು. ಫಸಲು ಕೈಗೆ ಬರುತ್ತಿದೆ ಎಂದು ನಿರೀಕ್ಷೆ ಮಾಡುತ್ತಿರುವಾಗ ಬಿರುಗಾಳಿ ಅಪ್ಪಳಿಸಿ ಬದುಕನ್ನು ಕಿತ್ತುಕೊಂಡಿದೆ. ಸರ್ಕಾರ ತನ್ನ ನೆರವಿಗೆ ಬರಬೇಕು ಎಂದು ಸಂತ್ರಸ್ತ ರೈತ ಮನವಿ ಮಾಡಿದ್ದಾರೆ.