ನವದೆಹಲಿ (ಪಿಟಿಐ): ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧಿಕಾರಕ್ಕೆ ಬಂದರೆ ಇಡೀ ಕಾಶ್ಮೀರವನ್ನು ಭಾರತದಿಂದ ವಶಪಡಿಸಿಕೊಳ್ಳಲಾಗುವುದು ಎಂದು ಆ ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ದಾರಿ ನೀಡಿದ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
‘ಬಿಲಾವಲ್ಗೆ ಭ್ರಮೆ ಇದೆ’ ಎಂದು ಭಾರತ ಶನಿವಾರ ಇಲ್ಲಿ ವ್ಯಾಖ್ಯಾನಿಸಿದೆ. ‘ರಾಷ್ಟ್ರದ ಏಕತೆ ಮತ್ತು ಒಗ್ಗಟ್ಟಿನ ವಿಚಾರದಲ್ಲಿ ಚೌಕಾಸಿಗೆ ಅವಕಾಶವೇ ಇಲ್ಲ. ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಬೇಕು ಎನ್ನುವ ನಮ್ಮ ನೀತಿಯ ಅರ್ಥ ನಮ್ಮ ಗಡಿಯನ್ನು ಬದಲಾಯಿಸುತ್ತೇವೆ ಎಂದಲ್ಲ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
‘ಒಂದಂಗುಲವೂ ಬಿಡೆನು’
ಇಸ್ಲಾಮಾಬಾದ್ ವರದಿ: ಪಾಕ್ ಪಂಜಾಬ್ನ ಮುಲ್ತಾನ್ನಲ್ಲಿ ಶುಕ್ರವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿಲಾವಲ್ ಅವರು, ‘ಪಾಕಿಸ್ತಾನಕ್ಕೆ ಸೇರಿದ ಕಾಶ್ಮೀರದ ನೆಲವನ್ನು ಒಂದು ಅಂಗುಲವೂ ಬಿಡದೆ ನಾನು ವಶಪಡಿಸಿಕೊಳ್ಳುತ್ತೇನೆ’ ಎಂದು ಶುಕ್ರವಾರ ಘೋಷಿಸಿದರು.
ಅವರು ಈ ವಿವಾದಿತ ಹೇಳಿಕೆ ನೀಡುವಾಗ ಪಾಕ್ನ ಮಾಜಿ ಪ್ರಧಾನಿಗಳಾದ ಯುಸೂಫ್ ರಾಜಾ ಗಿಲಾನಿ ಮತ್ತು ರಾಜಾ ಪರ್ವೇಜ್ ಅಶ್ರಫ್ ಅವರೂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿಲಾವಲ್ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದರು.
ಬಿಲಾವಲ್ ಪಾಕ್ನ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೊ ದಂಪತಿಯ ಮಗ. ಇದುವರೆಗೂ ಪಿಪಿಪಿ ಭಾರತದ ಜೊತೆ ಉತ್ತಮ ಸ್ನೇಹ-ಬಾಂಧವ್ಯ ಹೊಂದಿದ ಪಕ್ಷವಾಗಿದೆ.