ಮಾಲೂರು: ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಚಂದ್ರಪ್ಪ ನಕಲಿ ದಾಖಲಾತಿ ನೀಡಿ, ಗ್ರಾಮಸ್ಥರಲ್ಲಿ ಶಾಂತಿ ಸೌಹಾರ್ದ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸದಸ್ಯರು ಪಂಚಾಯಿತಿ ಕಚೇರಿಗೆ ಬುಧವಾರ ಬೀಗ ಹಾಕಿ, ಪ್ರತಿಭಟನೆ ನಡೆಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ.ವೆಂಕಟೇಶ್ ಮಾತನಾಡಿ, ತಾಲ್ಲೂಕಿನ ಕಸಬಾ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಚಂದ್ರಪ್ಪ ಭಾವನಹಳ್ಳಿ ಗ್ರಾಮದ ಹನುಮಕ್ಕ ಎಂಬುವರಿಗೆ ಡಿ.ಆರ್.ನಂ 48/113ರಲ್ಲಿನ ಖಾಲಿ ನಿವೇಶನವನ್ನು 2003–04ರಲ್ಲಿ ಖಾತೆ ಮಾಡಿಕೊಟ್ಟಿದ್ದಾರೆ.
ನಂತರ ಅದೇ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ಕಮಲಾ ಬಾಯಿ, ವೆಂಕಟಸ್ವಾಮಿ ಎಂಬುವರಿಗೂ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಇದರಿಂದ ಗ್ರಾಮಸ್ಥರಲ್ಲಿ ವೈಮನಸ್ಯ ಉಂಟಾಗಿ ಸೌಹಾರ್ದ ವಾತಾವರಣ ಕದಡುವಂತಾಗಿದೆ. ಆದ್ದರಿಂದ ನಕಲಿ ದಾಖಲೆ ಸೃಷ್ಟಿ ಮಾಡುತ್ತಿರುವ ಬಿಲ್ ಕಲೆಕ್ಟರ್ ಚಂದ್ರಪ್ಪನನ್ನು ಕರ್ತವ್ಯದಿಂದ ವಜಾಗೊಳಿಸಬೇಕು. ಅವರಿಗೆ ಸಹಕರಿಸುತ್ತಿರುವ ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚವ್ವೇನಹಳ್ಳಿ ಕೆ.ವಿಜಿ, ಸಂಘಟನಾ ಸಂಚಾಲಕ ಮೈಲಾಂಡಹಳ್ಳಿ ಮುನಿಯಪ್ಪ, ವರದಾಪುರ ವೆಂಕಟೇಶ್, ದೊಡ್ಡಕಲ್ಲಹಳ್ಳಿ ನಾರಾಯಣಸ್ವಾಮಿ, ಕೋಡೂರು ನಾಗರಾಜು, ರಾಮಚಂದ್ರಪ್ಪ, ರಾಘವೇಂದ್ರ ಇತರರಿದ್ದರು.