ಕಬ್ಬಿನ ಬೆಳೆಗೆ ಸರ್ಕಾರ ನಿಗದಿಪಡಿಸಿದ ದರವನ್ನು ಕೊಡಲು ಹಿಂದೇಟು ಹಾಕುತ್ತಿರುವ ಸಕ್ಕರೆ ಕಾರ್ಖಾನೆ ಮಾಲೀಕರಿಗೆ, ತಾವೇ ಉತ್ಪಾದಕ ರಾಗುವ ಮೂಲಕ ರೈತರು ಬುದ್ಧಿ ಕಲಿಸಬೇಕಾಗಿದೆ.
ಅದು ಹೇಗೆಂದರೆ, ತಾವು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆ ನಿಗದಿಪಡಿಸಿದ ಬೆಲೆಗೆ ಪೂರೈಸುವ ಬದಲು ತಾವೇ ತಮ್ಮ ಹೊಲದಲ್ಲಿ ಗಾಣ ಮಾಡಿ ಬೆಲ್ಲ ತಯಾರಿಸಿ ಮಾರಬಹುದು. ಇದಕ್ಕೆ ಮತ್ತೊಂದಿಷ್ಟು ಶ್ರಮ ಹಾಗೂ ಕಾರ್ಮಿಕರ ಅವಶ್ಯಕತೆ ಬೇಕಾಗುತ್ತದೆಯಾದರೂ ಈ ದಿಟ್ಟ ಕ್ರಮದಿಂದ ಕಬ್ಬು ಬೆಳೆಗಾರರು ಸ್ವಾವಲಂಬಿಗಳಾಗಿ ತಲೆ ಎತ್ತಿ ಬದುಕಬಹುದಾಗಿದೆ.
ಇದಕ್ಕೆ ಸರ್ಕಾರ ಮತ್ತು ಜನರ ಸಹಾಯವೂ ಬೇಕಾಗುತ್ತದೆ. ರೈತರು ಉತ್ಪಾದಿಸುವ ಬೆಲ್ಲಕ್ಕೆ ಯೋಗ್ಯ ವೈಜ್ಞಾನಿಕ ದರವನ್ನು ಸರ್ಕಾರ ಕಾಲಕಾಲಕ್ಕೆ ನಿಗದಿಪಡಿಸಬೇಕು. ಜನರು ಸಕ್ಕರೆ ಎಂಬ ಬಿಳಿ ವಿಷವನ್ನು ತ್ಯಜಿಸಿ ಬೆಲ್ಲವೆಂಬ ಅಮೃತವನ್ನು ಹೆಚ್ಚು ಹೆಚ್ಚು ಬಳಸಬೇಕು.