ಗುಡಿಬಂಡೆ: ಕಳೆದ ಸೋಮವಾರದಿಂದ ತಾಲ್ಲೂಕಿನಾದ್ಯಂತ ಬಿಸಿಯೂಟ ನೌಕರರು ಮುಷ್ಕರ ನಡೆಸುತ್ತಿದ್ದು, ತಾಲ್ಲೂಕಿನ ಸಾಕಷ್ಟು ಶಾಲೆ ಮಕ್ಕಳು ಮಧ್ಯಾಹ್ನ ಉಪವಾಸ ಇರುವಂತಾಗಿದೆ. ಕ್ಷೀರ ಭಾಗ್ಯ ಯೋಜನೆಯೂ ಸ್ಥಗಿತಗೊಂಡಿದೆ.
ಬಿಸಿಯೂಟ ಯೋಜನೆ ಖಾಸಗೀಕರಣ ವಿರೋಧಿಸಿ, ಕನಿಷ್ಠ ಕೂಲಿ, ಸೇವೆ ಕಾಯಂಗೆ ಒತ್ತಾಯಿಸಿ ಬಿಸಿಯೂಟ ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ತಾಲ್ಲೂಕಿನಲ್ಲಿ 116 ಶಾಲೆಗಳ ಸುಮಾರು 7000 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿ ಊಟ ಸೇವಿಸುತ್ತಿದ್ದರು. ತಾಲ್ಲೂಕಿನ ಶೇ 30ರಷ್ಟು ಶಾಲೆಗಳಲ್ಲಿ ಬಿಸಿಯೂಟ ಮುಂದುವರೆದಿದೆ. ಶೇ 70ರಷ್ಟು ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಇದರಿಂದ ಶಾಲಾ ಮಕ್ಕಳು ಉಪವಾಸ ಇರಬೇಕಾದ ಪರಿಸ್ಥಿತಿ ಇದೆ.
ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮಾಡುತ್ತಿರುವ ಬಿಸಿಯೂಟ ನೌಕರರಿಗೆ ಸೂಕ್ತ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿ ಶಾಲೆಗೆ ಒಬ್ಬರು ಮುಖ್ಯ ಅಡುಗೆಯವರು, ಅಡುಗೆ ಸಹಾಯಕರನ್ನು ನೇಮಿಸಲಾಗಿದೆ. ತಿಂಗಳಿಗೆ ₨ 1,100 ನೀಡಲಾಗುತ್ತಿದೆ. ಈ ರೀತಿ ವರ್ಷದಲ್ಲಿ 10 ತಿಂಗಳು ಮಾತ್ರ ವೇತನ ನೀಡಲಾಗುತ್ತಿದೆ.
ಮುಷ್ಕರ ಯಾವಾಗ ನಿಲ್ಲಬಹುದು ಎಂಬ ಮಾಹಿತಿಯೂ ಇಲ್ಲ. ಕೆಲವು ವಿದಾರ್ಥಿಗಳು ಇತ್ತೀಚೆಗೆ ಮನೆಯಿಂದ ಊಟ ಕಟ್ಟಿಕೊಂಡು ಬರುತ್ತಿದ್ದಾರೆ. ಬಡ ವಿದ್ಯಾರ್ಥಿಗಳ ಮೇಲೆ ಮುಷ್ಕರ ಗಂಭೀರ ಪರಿಣಾಮ ಉಂಟುಮಾಡಿದೆ.