ಬೆಂಗಳೂರು:`ಅಕ್ಷಯ ಪಾತ್ರ' ದ ಭೋಜನಾ ವಿತರಣೆಗೆ ಕಾರ್ಪೊರೇಷನ್ ಬ್ಯಾಂಕ್ನ ವತಿಯಿಂದ ವಾಹನವನ್ನು ಮಂಗಳವಾರ ದೇಣಿಗೆಯಾಗಿ ನೀಡಲಾಯಿತು.
ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧುಪಂಡಿತ್ ದಾಸ್ ಮಾತನಾಡಿ, `ಸಂಸ್ಥೆಯು 2020 ರ ವೇಳೆಗೆ ದೇಶ ದಾದ್ಯಂತ ಐದು ದಶಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸುವ ಗುರಿ ಹೊಂದಲಾಗಿದೆ. ಇಂತಹ ಕಾರ್ಯಗಳಲ್ಲಿ ಹಲವು ಬ್ಯಾಂಕ್ಗಳು ಸಹಕರಿಸುತ್ತಿವೆ. ಕಾರ್ಪೊರೇಷನ್ ಬ್ಯಾಂಕ್ ಯೋಜನೆಗೆ ನಿರಂತರವಾಗಿ ಸಹಕಾರ ನೀಡುತ್ತಿದೆ' ಎಂದರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್ ಮಾತನಾಡಿ, `ಅಕ್ಷಯ ಪಾತ್ರೆಯ ನೀಲಿ ಬಣ್ಣದ ಬಸ್ಗಳು ದೇಶದಾದ್ಯಂತ ಇರುವ ಮಕ್ಕಳ ಆಶಾಕಿರಣವಾಗಿದೆ. ಇದು ಮಕ್ಕಳ ಹಸಿವನ್ನು ದೂರಾಗಿಸುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಬ್ಯಾಂಕ್ ತನ್ನನ್ನು ತೊಡಗಿಸಿ ಕೊಂಡಿರುವುದು ಸಂತಸ ತಂದಿದೆ' ಎಂದು ಹೇಳಿದರು.
ದೇಣಿಗೆಯಾಗಿ ನೀಡಿರುವ ಈ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ದೂಳು ರಹಿತ ಮತ್ತು ಏಕ ಉಷ್ಣಾಂಶ ಹೊಂದಿರುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಆಹಾರ ಕಾಪಾಡಲು, ಬಿಸಿಯಾದ ಮತ್ತು ಆರೋಗ್ಯಯುತ ಆಹಾರ ಸರಬರಾಜು ಮಾಡಲು ಈ ವಾಹನವು ಸಹಕಾರಿಯಾಗಿದೆ.