ಬಂಟ್ವಾಳ: ಬದುಕಿನಲ್ಲಿ ಇಚ್ಛಾಶಕ್ತಿಯೊಂದಿಗೆ ಮುನ್ನಡೆದಾಗ ಸಾಧನೆಗೆ ಪ್ರೇರಣೆಯಾಗುತ್ತದೆ. ಕರ್ತವ್ಯದಲ್ಲಿ ಇಂತಹ ಸಾಧನೆಯನ್ನು ಎಎಸ್ಪಿ ಅಮಿತ್ಸಿಂಗ್ ತೋರಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದರು.ವರ್ಗಾವಣೆಗೊಂಡಿರುವ ಪುತ್ತೂರು ಎಎಸ್ಪಿ ಅಮಿತ್ಸಿಂಗ್ ಅವರನ್ನು, ತಾಲೂಕಿನ ಬಿ.ಸಿ.ರೋಡ್ನಲ್ಲಿ ಬುಧವಾರ ರಾತ್ರಿ ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಇದೇ ವೇಳೆ ನೂತನ ಎಎಸ್ಪಿ ಡಾ.ರೋಹಿಣಿ ಇವರನ್ನು ಸ್ವಾಗತಿಸಿ, ನಿವೃತ್ತಿಗೊಳ್ಳುತ್ತಿರುವ ಪೊಲೀಸ್ ಸಿಬ್ಬಂದಿ ಕೆ.ಕಾಂತಪ್ಪ ಗೌಡ ಮತ್ತು ರಾಷ್ಟ್ರಪತಿ ಪದಕ ವಿಜೇತ ಡಿವೈಎಸ್ಪಿ ಬಿ.ಜೆ.ಭಂಡಾರಿ ಇವರನ್ನು ಸನ್ಮಾನಿಸಲಾಯಿತು.ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಡಾ.ಹರೀಶ್ ಕುಮಾರ್ ಮಾತನಾಡಿ, ಎಎಸ್ಪಿ ಅಮಿತ್ಸಿಂಗ್ ಅವರ ಕಾರ್ಯವೈಖರಿ ಶ್ಲಾಘಿಸಿದರು.
ಬೆಂಜನಪದವು ಕೆನರಾ ಕಾಲೇಜಿನ ಪ್ರಾಂಶುಪಾಲ ಡಾ.ನಾಗೇಶ ಪ್ರಭು, ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಕೆ.ಚಿನ್ನಗಿರಿ ಗೌಡ, ವಕೀಲರ ಸಂಘದ ಅಧ್ಯಕ್ಷ ಕಜೆ ರಾಮಚಂದ್ರ ಭಟ್, ಡಿಸಿಐಬಿ ಇನ್ಸ್ಪೆಕ್ಟರ್ ವೆಂಕಟೇಶ ಪ್ರಸನ್ನ, ಸಂದೀಪ್ ಸಾಲ್ಯಾನ್, ವಕೀಲ ಅಶೋಕ ಕುಮಾರ್, ಜಿಲ್ಲಾ ನಾಗರಿಕ ಬಂದೂಕು ತರಬೇತಿ ಕಾರ್ಯದರ್ಶಿ ಸತ್ಯಪ್ರಕಾಶ್ ಅನಿಸಿಕೆ ವ್ಯಕ್ತಪಡಿಸಿದರು.
ವೃತ್ತನಿರೀಕ್ಷಕ ಕೆ.ನಂಜುಂಡೇ ಗೌಡ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮಾಂತರ ಮತ್ತು ನಗರ ಠಾಣಾಧಿಕಾರಿ ಮಹಮ್ಮದ್ ರಫೀಕ್ ಮತ್ತು ವಿವೇಕಾನಂದ ಸಹಿತ ವಿವಿಧ ತಾಲೂಕಿನ ಎಸೈ, ಇನ್ಸ್ಪೆಕ್ಟರ್, ಸಿಬ್ಬಂದಿ ಉಪಸ್ಥಿತರಿದ್ದರು.