ಯಾದಗಿರಿ: ತಾಲ್ಲೂಕಿನ ಸೈದಾಪುರದ ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ, ಕಡಲೆ ಬೀಜ, ಔಷಧಗಳ ವಿತರಣೆ ಆಗದಿರುವುದರಿಂದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಸಿಬ್ಬಂದಿ ಕಚೇರಿಯಲ್ಲಿ ಇರದೆ ಬೀಗ ಹಾಕಿ ಗೈರು ಹಾಜರಿರುತ್ತಾರೆ. ನಿತ್ಯ ಅಧಿಕಾರಿಗಳಿಗಾಗಿ ಸುತ್ತಾಡಿ ಬೇಸರವಾಗಿದೆ. ಕೀಟಗಳ ಹಾವಳಿ ಆರಂಭವಾಗಿದ್ದು, ಈ ಬಗ್ಗೆ ಸರಿಯಾದ ಮಾಹಿತಿ ರೈತ ಸಂಪರ್ಕದಿಂದ ಸಿಗುತ್ತಿಲ್ಲ. ಇದರಿಂದಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ರೈತರ ನೆರವಿಗಾಗಿಯೇ ರೈತ ಸಂಪರ್ಕ ಕೇಂದ್ರ ಆರಂಭಿಸಿದ್ದರೂ, ಅದು ಸರಿಯಾಗಿ ಉಪಯೋಗ ಆಗುತ್ತಿಲ್ಲ. ಇಲ್ಲಿನ ಅವ್ಯವಸ್ಥೆ ಸರಿಪಡಿಸಿ ಸಂಬಂಧಿಸಿದ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ಕೂಡಲೇ ರೈತರಿಗೆ ಬೀಜ, ಔಷಧಿವಿತರಿಸಲು ಮುಂದಾಗಬೇಕು ಎಂದು ದೇವನಾಯಕ ಬದ್ದೇಪಲ್ಲಿ, ನರಸಪ್ಪ ಬಾಗ್ಲಿ, ಮಹಾದೇವಯ್ಯಸ್ವಾಮಿ ಬದ್ದೇಪಲ್ಲಿ, ರವಿ ಯಾಟಗಲ್ ಬಾಡಿಯಾಲ, ನರಸಿಂಗ ಕೋರೆ, ಸಾಬಣ್ಣ ಸೈದಾಪುರ, ವಿಶ್ವನಾಥರಡ್ಡಿ ಮುನಗಲ್, ಭೀಮಪ್ಪ, ಲಕ್ಷ್ಮಣ ನಾಯಕ, ಹಣ್ಮಂತ ಕುಡ್ಲೂರು, ಮಾಳಪ್ಪ, ಮಲ್ಲಪ್ಪ, ಸಾಬಣ್ಣ ಮಡಿವಾಳ ಹಾಗೂ ಸುತ್ತಲಿನ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.