ಕೋಲಾರ: ರೈತ ವಿರೋಧಿ ಬೀಜ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇದನ್ನು ಎಲ್ಲ ಶಾಸಕರು ಮತ್ತು ಸಂಸದರು ವಿರೋಧಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಬಗ್ಗೆ ರಾಜ್ಯದ ರೈತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರೈತ ಸಂಘಗಳು `ದೇಶಿಯ ಬೀಜ ಸಂರಕ್ಷಿಸಿ, ಕುಲಾಂತರಿ ಬೀಜ ತಿರಸ್ಕರಿಸಿ~ ಎಂಬ ಜಾಥಾ ಮತ್ತು ಸಂವಾದ ನಡೆಸುತ್ತಿವೆ. ಎಲ್ಲೆಡೆ ರೈತರಿಂದ ಬೀಜ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಮಸೂದೆ ಜಾರಿಗೆ ತಂದರೆ ರೈತರು ಬೆಳೆದ ನಾಟಿ ಬೀಜಗಳನ್ನು ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಬೀಜ ಕಂಪೆನಿಗಳಿಂದ ರೈತರಿಗೆ ಬೆಳೆ ನಷ್ಟವಾದರೆ ಕೇವಲ 25 ಸಾವಿರ ರೂಪಾಯಿ ದಂಡ ವಿಧಿಸಲು ಮಾತ್ರ ಅವಕಾಶ ಮಾಡಿದೆ ಎಂದು ದೂರಿದರು.
ಘಟಕದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠಪುರ ಮುನೇಗೌಡ, ಪಾರೇಹೊಸಹಳ್ಳಿ ಶ್ಯಾಮಣ್ಣ, ಐಸಂದ್ರ ಮಿಟ್ಟೂರು ಮಂಜುನಾಥ, ಕೃಷ್ಣಪ್ಪ, ನಾಗರಾಜ್ ಇತರರು ಹಾಜರಿದ್ದರು.
ಸಿದ್ಧರಾಮೇಶ್ವರರ ಜಯಂತಿ
(ಬೀದರ್ ವರದಿ) ಶಿವಯೋಗಿ ಸಿದ್ಧರಾಮೇಶ್ವರರ 839 ನೇ ಜಯಂತಿ ಹಾಗೂ ಜಿಲ್ಲಾ ಪ್ರಥಮ ಭೋವಿ (ವಡ್ಡರ್) ಸಮಾವೇಶದ ನಿಮಿತ್ತ ನಗರದಲ್ಲಿ ಸೋಮವಾರ ಅಲಂಕೃತ ವಾಹನದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರ ಹಾಗೂ ಸಾರೋಟಿನಲ್ಲಿ ಕರ್ನಾಟಕ ಭೋವಿ (ವಡ್ಡರ) ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಭವ್ಯ ಮೆರವಣಿಗೆ ನಡೆಯಿತು.