ನವದೆಹಲಿ (ಪಿಟಿಐ): ದೇಶದ ಸುಮಾರು 55 ಲಕ್ಷ ಬೀಡಿ ಕಾರ್ಮಿಕರು ಇನ್ನು ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯಡಿ ಆರೋಗ್ಯ ವಿಮೆಯ ಸೌಲಭ್ಯಗಳನ್ನು ಪಡೆಯಲಿದ್ದಾರೆ.
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮತಿ ನೀಡಲಾಯಿತು. ನಂತರ ಸುದ್ದಿಗಾರರ ಜತೆ ಮಾತನಾಡಿದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಯೋಜನೆಯ ವಿವರ ನೀಡಿದರು.
`ಈ ಯೋಜನೆಗಾಗಿ ಸರ್ಕಾರವು ಸುಮಾರು 311.25 ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ಬೀಡಿ ಕಾರ್ಮಿಕರು ಇದರ ಪ್ರಯೋಜನ ಪಡೆಯಲಿದ್ದು, 2013-14ರ ವೇಳೆಗೆ ದೇಶದ ಎಲ್ಲ ಬೀಡಿ ಕಾರ್ಮಿಕರೂ ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ~ ಎಂದು ತಿಳಿಸಿದರು.
ಇದರ ಅನ್ವಯ ಬೀಡಿ ಕಾರ್ಮಿಕ ಹಾಗೂ ಆತನ ಕುಟುಂಬದ ಐವರು ಸದಸ್ಯರು 30 ಸಾವಿರ ರೂಪಾಯಿ ಮೊತ್ತದ ಆರೋಗ್ಯ ವಿಮೆ ಪಡೆಯಲಿದ್ದಾರೆ. ಆಸ್ಪತ್ರೆಯ ಬಿಲ್ ಇದಕ್ಕಿಂತ ಹೆಚ್ಚು ಬಂದಲ್ಲಿ ಅದನ್ನು ಕಲ್ಯಾಣ ಆಯುಕ್ತರ ಕಚೇರಿಯಿಂದ ಈಗಿನಂತೆಯೇ ಪಡೆಯಬಹುದು. ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ಖರ್ಗೆ ವಿವರಿಸಿದರು.
ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ದೇಶದಲ್ಲಿ ಒಟ್ಟು 55 ಲಕ್ಷ ಬೀಡಿ ಕಾರ್ಮಿಕರಿರುವ ಅಂದಾಜಿದೆ.