ಬೀದರ್: ವಿಧಾನಸಭೆ ಚುನಾವಣೆಗೆ ವಿವಿಧ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆಯನ್ನು ಆಯಾ ಚುನಾವಣಾಧಿಕಾರಿಗಳು ಗುರುವಾರ ನಡೆಸಿದ್ದು, ಜಿಲ್ಲೆಯಲ್ಲಿ ಒಟ್ಟು ನಾಲ್ಕು ನಾಮಪತ್ರಗಳು ತಿರಸ್ಕೃತಗೊಂಡಿವೆ.
ಅಭ್ಯರ್ಥಿಗಳು ಸಮಯ ಕೇಳಿದ ಹಿನ್ನೆಲೆಯಲ್ಲಿ ಭಾಲ್ಕಿ ಕ್ಷೇತ್ರದಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸೂಚಕರ ಸಹಿ ಇಲ್ಲದಿರುವುದು, ತಪ್ಪಾಗಿ ಮಾಹಿತಿ ದಾಖಲಿಸಿರುವ ಕಾರಣಗಳಿಗೆ ನಾಮಪತ್ರಗಳು ತಿರಸ್ಕೃತಗೊಂಡಿವೆ.
ಬೀದರ್ ಕ್ಷೇತ್ರದಲ್ಲಿ ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿ ಅಶೋಕ್ ಖೇಣಿ ಅವರ ನಾಮಪತ್ರ ಅಂಗೀಕರಿಸದಂತೆ ಇಬ್ಬರು ಅಭ್ಯರ್ಥಿಗಳು ಆಕ್ಷೇಪ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಕುರಿತ ವಿಚಾರಣೆಯನ್ನುಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿದೆ. ಉಳಿದಂತೆ, ತಿರಸ್ಕೃತಗೊಂಡ ಅಭ್ಯರ್ಥಿಗಳ ಹೆಸರು ಹಾಗೂ ಪಕ್ಷಗಳ ವಿವರ ಹೀಗಿದೆ.
ಹುಮನಾಬಾದ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಸುಭಾಷ್ ತಂದೆ ಭಿಮಶಾ, ಬಸವರಾಜ್ ತಂದೆ ಲಿಂಗಪ್ಪ ಅವರು ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತಗೊಂಡಿವೆ. ಅಲ್ಲದೆ, ನಿಗದಿತ ಸಂಖ್ಯೆಯಲ್ಲಿ ಸೂಚಕರ ಹೆಸರು ನಮೂದಿಸದ ಕಾರಣಕ್ಕೇ ಅಬ್ದುಲ್ ಸಮೀದ್ ತಂದೆ ಉಮರ್ ಅಲಿ ಅವರ ನಾಮಪತ್ರ ತಿರಸ್ಕೃತವಾಗಿದೆ.
ಬೀದರ್ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದ ಸಯ್ಯದ್ ವಹೀದ್ ತಂದೆ ಸಯ್ಯದ ಶಬ್ಬೀರ್ ಅಲಿ ಅವರ ನಾಮಪತ್ರವನ್ನು ಬಿ ಫಾರಂ ನೀಡದ ಕಾರಣ ತಿರಸ್ಕರಿಸಲಾಗಿದೆ.