ಚಿಂತಾಮಣಿ: ಬೀದಿ ನಾಯಿಗಳು ಕುರಿಗಳ ದೊಡ್ಡಿಗೆ ನುಗ್ಗಿ 40 ಕುರಿಗಳನ್ನು ಕಚ್ಚಿ ಸಾಯಿಸಿದ ಘಟನೆ ನಗರದ ಅಗ್ರಹಾರದಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.
ಅಗ್ರಹಾರದ ನಿವಾಸಿ ಶಂಕರಪ್ಪ ಅವರ ದೊಡ್ಡಿಗೆ ಮಧ್ಯರಾತ್ರಿ ನುಗ್ಗಿದ ನಾಯಿಗಳು ಕುರಿಗಳ ಕತ್ತು ಮತ್ತು ದೇಹದ ಇತರ ಭಾಗಗಳನ್ನು ಕಚ್ಚಿ ಗಾಯಗೊಳಿಸಿ ಸಾಯಿಸಿವೆ.
ಬ್ಯಾಂಕ್ನಿಂದ ಸಾಲ ಪಡೆದು ಆಸ್ಟ್ರೇಲಿಯನ್ ಹೈಬ್ರಿಡ್ ತಳಿ ಕುರಿಗಳ ಸಾಕಾಣಿಕೆಯಲ್ಲಿ ತೊಡಗಿದ್ದರು. ಪಶುಪಾಲನಾ ಇಲಾಖೆ ವೈದ್ಯರು ಹಾಗೂ ಸ್ಥಳಕ್ಕೆ ಭೇಟಿ ನೀಡಿ ಉಳಿದ ಕುರಿಗಳಿಗೆ ಚಿಕಿತ್ಸೆ ನೀಡಿದರು.
ಕುರಿಗಳ ಸಾವಿನಿಂದ ಕಂಗಾಲಾಗಿರುವ ಶಂಕರಪ್ಪ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಸತ್ತ ಕುರಿಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಇದರಿಂದ ಸುಮಾರು 3 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ನಾಗರತ್ನಮ್ಮ, ಆರೋಗ್ಯ ನಿರೀಕ್ಷಕ ಸಿ.ಕೆ.ಬಾಬು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ನಗರಸಭೆ ಸ್ಪಷ್ಟನೆ : ಬೀದಿ ನಾಯಿಗಳ ಹಾವಳಿ ತಡೆಗೆ ನಗರಸಭೆ ವತಿಯಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಣಿ ದಯಾ ಸಂಘಗಳು ನೌಕರರ ಮೇಲೆ ಮೊಕದ್ದಮೆ ಹೂಡಿದ್ದಾರೆ. ಆದರೂ ಸಹ ನಾಯಿಗಳ ಉಪಟಳ ಕಡಿಮೆ ಮಾಡಲು ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಗುತ್ತಿಗೆ ನೀಡಲಾಗಿದೆ ಎಂದು ನಗರಸಭೆ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.