ಯಾದಗಿರಿ: ಬಿಡಾಡಿ ನಾಯಿಗಳು ವಡಗೇರಾದ ಗ್ರಾಮದ ತುಂಬ ಓಡಾಡುತ್ತಿದ್ದು, ಜನರಿಗೆ ತೊಂದರೆ ಕೊಡುತ್ತವೆ ಎಂದು ಕರವೇ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಅಬ್ದುಲ್ ಚಿಗಾನೂರ ದೂರಿದ್ದಾರೆ.
ಗ್ರಾಮದಲ್ಲಿ ಅನೇಕ ಬೀದಿ ನಾಯಿಗಳಿವೆ. ರಾತ್ರಿ ಸಮಯದಲ್ಲಿ ಇವುಗಳ ಕಾಟ ವಿಪರೀತವಾಗಿದೆ. ಸಾರ್ವಜನಿಕರು ಮನೆಗೆ ಹೋಗಬೇಕಾದರೆ ಅಡ್ಡಗಟ್ಟುವುದರ ಜೊತೆಗೆ ಅನೇಕ ಬಾರಿ, ಕಡಿದು ಗಾಯಗೊಳಿಸಿವೆ. ಚಿಕ್ಕ ಬಾಲಕರನ್ನು ಕಡಿದ ಉದಾಹರಣೆಗಳಿವೆ. ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯ ರಸ್ತೆಯ ಮೇಲೆ ಕಾದಾಡುತ್ತಾ ಬಂದು ಸಾರ್ವಜನಿಕರ ಮೇಲೆ ಬೀಳುವ ಈ ನಾಯಿಗಳು, ಹಲವರಿಗೆ ತೊಂದರೆ ನೀಡುತ್ತಿವೆ. ಅನೇಕ ಬಾರಿ ವಯೋವೃದ್ಧರು ಇವುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕೈ ಕಾಲುಗಳನ್ನು ಮುರಿದುಕೊಂಡಿದ್ದಾರೆ. ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಬೀದಿ ನಾಯಿಗಳ ಕಾಟ ತಪ್ಪಿಸಸಬೇಕು. ಇಲ್ಲದಿದ್ದರೆ, ಗ್ರಾಮಸ್ಥರ ಜೊತೆಗೂಡಿ ಕಚೇರಿಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೋಬಳಿ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್, ರಫಿ ದೇವದುರ್ಗ ಎಚ್ಚರಿಸಿದ್ದಾರೆ.