ಕುಣಿಗಲ್: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಎರಡು ದಿನಗಳಿಂದ ಹದಿನೈದಕ್ಕೂ ಹೆಚ್ಚು ಮಂದಿ ನಾಯಿ ಕಡಿತದಿಂದ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ವಾಸವಿರುವ ಖಾಸಗಿ ಶಾಲೆಯೊಂದರ ಪ್ರಾಚಾರ್ಯ ಶಿವಪ್ಪ ಅವರ ಪುತ್ರಿ ಮಧುಮಿತ (10), ಅಂಗಡಿಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ.
ನಾಯಿ ಕಡಿತದಿಂದಾಗಿ ತಲೆ, ಮುಖ, ಕೈ, ತೊಡೆ ಭಾಗಕ್ಕೆ ಗಾಯವಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕಳಿಸಲಾಗಿದೆ. ಇದೆ ಬಡಾವಣೆಯ ಜಾಹಿದುನ್ನಿಸಾ, ಕೋಟೆ ಪ್ರದೇಶದ ಪ್ಯಾರೆಜಾನ್ (6), ದಸ್ತಗೀರ್, ನವಾಬ್, ಗುಜ್ಜಾರಿ ಮೊಹಲ್ಲಾ ಬಡಾವಣೆಯ ರಿಜ್ವಾನ್, ಪುರಸಭೆ ಬಸ್ನಿಲ್ದಾಣ ಬಳಿ ನಾಗರಾಜ್, ಸುರೇಶ್ ಎಂಬುವವರಿಗೆ ಬೀದಿ ನಾಯಿಗಳು ಕಚ್ಚಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬೀದಿ ನಾಯಿ ನಿಯಂತ್ರಿಸುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದು, ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಕೀಲರಾದ ರೆಹಮಾನ್, ಶುಕೂರುಲ್ಲ ಮತ್ತು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಮುಖ್ಯಾಧಿಕಾರಿ ಅನ್ನದಾನಿ ಪಟ್ಟಣದ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬೀದಿನಾಯಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.