ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿಗಳ ಕಾಟಕ್ಕೆ ಬೇಸತ್ತ ಜನ

Last Updated 14 ಜನವರಿ 2013, 6:06 IST
ಅಕ್ಷರ ಗಾತ್ರ

ಮಡಿಕೇರಿ: ಪ್ರವಾಸಿಗಳ ತಾಣವಾಗಿದ್ದ ಮಡಿಕೇರಿ ಈಗ ಬೀದಿನಾಯಿಗಳ ತಾಣವಾಗಿ ಮಾರ್ಪಟ್ಟಿದೆ. ನಗರದ ಯಾವುದೇ ಬಡಾವಣೆಗಳಿಗೆ ಹೋದರೂ ಈ ನಾಯಿಗಳ ಕಾಟ ತಪ್ಪಿದ್ದಲ್ಲ. ಈ ಕುರಿತು ಬಂದ ಹಲವು ದೂರುಗಳಿಗೆ ಸ್ಪಂದಿಸಿರುವ ನಗರಸಭೆಯು ನಾಯಿಗಳ ಸಂತಾನಶಕ್ತಿ ಹರಣಕ್ಕೆ ಮುಂದಾಗಿದೆ.

ಪಶುವೈದ್ಯರ ಸಲಹೆ ಪಡೆದು ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ನಗರಸಭೆ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ನಗರದ ಕಸದ ತೊಟ್ಟಿಗಳ ಬಳಿ, ಮಟನ್ ಶಾಪ್‌ಗಳ ಮುಂದೆ, ಮೀನು ಮಾರುಕಟ್ಟೆ ಬಳಿ ಬೀದಿನಾಯಿಗಳು ಗುಂಪುಗುಂಪಾಗಿ ಕಾಣಿಸಿಕೊಳ್ಳುತ್ತವೆ. ಇತ್ತೀಚೆಗೆ ಇವುಗಳ ಸಂಖ್ಯೆ ಎರಡು ಪಟ್ಟು, ಮೂರು ಪಟ್ಟಾಗಿದೆ. ಆದ್ದರಿಂದ ಇವುಗಳನ್ನು ನಿಯಂತ್ರಿಸಲೇಬೇಕಾದ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ನಗರಸಭೆಗೆ ದೂರು ನೀಡುವುದು ಸಾಮಾನ್ಯವಾಗಿದೆ.

ಸುಮಾರು 500ರಿಂದ 600 ಬೀದಿ ನಾಯಿಗಳು ಇರಬಹುದಾದ ಶಂಕೆ ಇದೆ. ಪ್ರಾಣಿಗಳನ್ನು ಹತ್ಯೆ ಮಾಡಬಾರ ದೆನ್ನುವ ಕಾರಣಕ್ಕಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವುದೇ ಲೇಸು ಎಂದು ಹಲವು ಜನರು ನಗರಸಭೆಗೆ ಸಲಹೆ ಕೂಡ ನೀಡಿದ್ದಾರೆ.

ಹಗಲು ಹೊತ್ತಿಗಿಂತ ರಾತ್ರಿ ಹೊತ್ತು ನಾಯಿಗಳ ಕಾಟ ಅತಿಹೆಚ್ಚು ಕಾಣಿಸಿಕೊಳ್ಳುತ್ತಿದೆ. ಗುಂಪು ಗುಂಪಾಗಿ ದಾಳಿ ಮಾಡುವುದರಿಂದ ಮಕ್ಕಳ ಸ್ಥಿತಿಯಂತೂ ಇನ್ನೂ ಭಯಾನಕ ವಾಗಿರುತ್ತದೆ.

ಪಾದಚಾರಿಗಳ ಮೇಲೆ ಎರಗಲು ಬೀದಿನಾಯಿಗಳು ಪ್ರಯತ್ನಿಸಿರುವ ಹಲವು ಪ್ರಕರಣಗಳು ನಡೆದಿವೆ. ಇತ್ತೀಚೆಗೆ ಶಾಲಾ ಬಾಲಕಿಯೊಬ್ಬಳ ಮೇಲೆ ಬೀದಿನಾಯಿಯೊಂದು ಎರಗಿ ಕಚ್ಚಿದ್ದು ನಗರದಲ್ಲಿ ಭಯ ಹುಟ್ಟಿಸಿದೆ.

ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಹೋಟೆಲ್ ತ್ಯಾಜ್ಯ, ತಿಂಡಿ ತಿನಿಸು ಹಾಗೂ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ತಿನ್ನಲು ಕೂಡ ಬೀದಿನಾಯಿಗಳ ನಡುವೆ ಕಾದಾಟಗಳು ನಡೆಯುತ್ತವೆ. ಆ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿದ್ದ ವ್ಯಕ್ತಿಗಳ ಮೇಲೂ ಇವು ದಾಳಿ ಮಾಡಿದ ಉದಾಹರಣೆಗಳಿವೆ.

ಆದಷ್ಟು ಶೀಘ್ರ ಬೀದಿನಾಯಿಗಳ ಕಾಟವನ್ನು ನಗರಸಭೆಯವರು ನಿಯಂತ್ರಿಸಬೇಕೆಂದು ಸ್ಥಳೀಯ ನಾಗರಿಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT