ಬೆಂಗಳೂರು: ಬೀದಿನಾಯಿಗಳನ್ನು ಹಿಡಿದು ನಾಡಿನಿಂದ ಕಾಡಿಗೆ ಬಿಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಿಂದ ಕಾಡು ಪ್ರಾಣಿಗಳಿಗೆ ಹಲವು ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಕೆಲ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷದಿಂದ ಅಕ್ರಮವಾಗಿ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಕೆಲ ಭಾಗಗಳು, ತುಮಕೂರು, ಹಾಗೂ ಕೆಜಿಎಫ್ನಲ್ಲಿ ಬೀದಿ ನಾಯಿಗಳನ್ನು ಹಿಡಿದು ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತಿದೆ ಎಂದು ಸರ್ವೋದಯ ಸೇವಾಬಾವಿ ಸಂಸ್ಥೆಯ ಟ್ರಸ್ಟಿ ವಿನಯ್ ಮೋರೆ ಆಪಾದಿಸಿದ್ದಾರೆ.
ಮಂಡ್ಯದ ನಗರ ಪ್ರದೇಶ, ಪಾಂಡವಪುರ, ಮದ್ದೂರಿನಲ್ಲಿ ಹಿಡಿದ ಬೀದಿನಾಯಿಗಳನ್ನು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಸೇರಿದಂತೆ ಕೆಲ ತಾಲ್ಲೂಕುಗಳಲ್ಲಿ ಹಿಡಿದ ಬೀದಿ ನಾಯಿಗಳನ್ನು ಬಂಡೀಪುರ ಅರಣ್ಯ ಪ್ರದೇಶಕ್ಕೆ ಬಿಡುತ್ತಿದ್ದರೆ, ಕೆಜಿಎಫ್ನಲ್ಲಿ ಕೃಷ್ಣಗಿರಿ ಅರಣ್ಯಕ್ಕೆ ಹಾಗೂ ತುಮಕೂರಿನಲ್ಲಿ ದೇವರಾಯನ ದುರ್ಗ ಹಾಗೂ ತಿಮ್ಮನಹಳ್ಳಿ ಅರಣ್ಯ ಪ್ರದೇಶಕ್ಕೆ ನಾಯಿಗಳನ್ನು ಸ್ಥಳಾಂತರ ಗೊಳಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ಈ ಬಗ್ಗೆ ಹಲವು ಬಾರಿ ಮಾಹಿತಿ ಬಂದಾಗ ಆಯಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ಸತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯರಿಗೆ
ಹಾಗೂ ನಗರಸಭೆಗಳ ಸದಸ್ಯರಿಗೆ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ’.
‘ಈ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಸಂಬಂಧ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿರುವ ಅಲ್ಲಿನ ನಗರಸಭೆಗಳ ಸದಸ್ಯರು, ಅರಣ್ಯ ಇಲಾಖೆಯ ಗಮನಕ್ಕೆ ಬಾರದಂತೆ ಅಕ್ರಮವಾಗಿ ಈ ಕೃತ್ಯ ಎಸಗುತ್ತಿದ್ದಾರೆ. ಆದರೆ ಇದು ಕಾನೂನುಬಾಹಿರ’.
‘ಅರಣ್ಯಗಳಲ್ಲಿ ಈಗಾಗಲೇ ನೀರು ಹಾಗೂ ಆಹಾರದ ಅಭಾವದಿಂದ ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಾಕು ಪ್ರಾಣಿಗಳಾದ ಬೀದಿ ನಾಯಿಗಳನ್ನು ಅರಣ್ಯಕ್ಕೆ ಬಿಟ್ಟರೆ, ಅವು ಚಿರತೆಯಂತಹ ಮಾಂಸಹಾರಿ ಪ್ರಾಣಿಗಳಿಗೆ ಸುಲಭವಾಗಿ ಆಹಾರವಾಗುತ್ತವೆ. ಇದರ ರುಚಿ ಹತ್ತಿ ಚಿರತೆಗಳು ಸುಲಭವಾಗಿ ಸಿಗುವ ಬೇಟೆಯನ್ನು ಅರಸಿ ನಾಡಿನತ್ತ ಬರುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ಅವರ ಅಭಿಪ್ರಾಯ.
‘ಮಂಡ್ಯ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಬೀದಿನಾಯಿಗಳನ್ನು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಅದರಂತೆ ಈಗಾಗಲೇ ನೂರಾರು ಬೀದಿ ನಾಯಿಗಳನ್ನು ಹಿಡಿದು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ’.
ಆರೋಗ್ಯವಂತ ಬೀದಿನಾಯಿಗಳನ್ನು ಕೊಲ್ಲದಂತೆ ಹಾಗೂ ಸ್ಥಳಾಂತರಿಸದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ, ಕೆಲ ಜಿಲ್ಲೆಗಳಲ್ಲಿನ ನಗರಸಭಾ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿ ಈ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಈ ಸಂಬಂಧ ಮಂಡ್ಯ ನಗರಸಭೆಯ ಸದಸ್ಯರ ವಿರುದ್ಧ ಈಗಾಗಲೇ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎನ್ನುತ್ತಾರೆ.
ಬೀದಿನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಶಸ್ತ್ರಚಿಕಿತ್ಸೆ: ಇನ್ನು ಬೀದರ್ನಲ್ಲಿ ನಿತ್ಯ ಬೀದಿ ನಾಯಿಗಳನ್ನು ಬಹಳ ಕ್ರೂರವಾಗಿ ಹತ್ಯೆ ಮಾಡಲಾಗುತ್ತಿದೆ. ಹಾಸನದಲ್ಲೂ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ರೀತಿ ಬೀದಿನಾಯಿಗಳನ್ನು ಹತ್ಯೆ ಮಾಡುವ ಬದಲು ಸಂತಾನ ಶಕ್ತಿ ನಿಯಂತ್ರಿಸಲು ನಗರಸಭೆ ಟೆಂಡರ್ ಕರೆದು ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಬಹುದು. ನಂತರ ವರ್ಷಕ್ಕೊಮ್ಮೆ ರೇಬಿಸ್ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಇದರಿಂದ ಬೀದಿನಾಯಿಗಳ ಸಂಖ್ಯೆ ಹಾಗೂ ರೇಬಿಸ್ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ಪರಿಸರವಾದಿ ನವೀನ ಕಾಮತ್ ಅಭಿಪ್ರಾಯಪಟ್ಟರು.
ನಗರಸಭಾ ಅಧ್ಯಕ್ಷರಿಗೆ ನೋಟಿಸ್
ಮುತ್ತತ್ತಿ ಅರಣ್ಯ ಪ್ರದೇಶದಲ್ಲಿರುವ ಕಾವೇರಿ ವನ್ಯಜೀವಿ ಧಾಮದಲ್ಲಿ ತಿಂಗಳ ಹಿಂದೆ ಬೀದಿ ನಾಯಿಗಳು ಜಿಂಕೆಗಳ ಮೇಲೆ ಗುಂಪುಗುಂಪಾಗಿ ದಾಳಿ ನಡೆಸಿದ ಘಟನೆ ನಡೆದಿತ್ತು. ಆಗಿನಿಂದ ಬಿಡಾಡಿ ನಾಯಿಗಳು ಅರಣ್ಯ ಪ್ರದೇಶವನ್ನು ಪ್ರವೇಶಿಸದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಅರಣ್ಯ ಸಿಬ್ಬಂದಿಗೂ ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್ನಲ್ಲೂ ಮಂಡ್ಯದಿಂದ ಬೀದಿನಾಯಿಗಳನ್ನುತಂದು ಕಾವೇರಿ ವನ್ಯಜೀವಿ ಧಾಮದಲ್ಲಿ ಬಿಡಲು ಪ್ರಯತ್ನಿಸಲಾಗಿತ್ತು. ಅದನ್ನು ಕಂಡ ನಮ್ಮ ಸಿಬ್ಬಂದಿ ತಡೆದಿದ್ದರು. ಈ ಬಗ್ಗೆ ಮಂಡ್ಯ ನಗರಸಭಾ ಅಧ್ಯಕ್ಷರಿಗೆ ನೋಟಿಸ್ ಕಳುಹಿಸಲಾಗಿದೆ. ಬೀದಿನಾಯಿಗಳನ್ನು ಅರಣ್ಯಗಳಿಗೆ ತಂದು ಬಿಡುವುದರಿಂದ ಸಣ್ಣ ವನ್ಯಜೀವಿಗಳಿಗೆ ಹಾನಿ ಹಾಗೂ ಕೆಲವೊಂದು ರೋಗಗಳು ವನ್ಯಜೀವಿಗಳಿಗೆ ಹರಡುತ್ತದೆ. ಅಲ್ಲದೆ ಚಿರತೆ ಹಾಗೂ ಇತರೆ ಪ್ರಾಣಿಗಳು ಈ ನಾಯಿಗಳನ್ನು ಹಿಂಬಾಲಿಸಿಸುವ ಸಾಧ್ಯತೆ ಇರುತ್ತದೆ.
–ಕೆ.ವಿ. ವಸಂತರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾವೇರಿ ವನ್ಯಜೀವಿ ಧಾಮ
ಸತ್ಯಕ್ಕೆ ದೂರವಾದ ಮಾತು
ಸಾಕು ಪ್ರಾಣಿಯಾಗಿರುವ ಬೀದಿ ನಾಯಿಗಳನ್ನು ಕಾಡಿಗೆ ಬಿಡುವುದು ಅಮಾನವೀಯ. ನಾಯಿಗಳನ್ನು ಅರಣ್ಯಕ್ಕೆ ಬಿಡುವುದರಿಂದ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಬಂದು ದಾಳಿ ನಡೆಸುವುದು ಸತ್ಯಕ್ಕೆ ದೂರವಾದ ಮಾತು. ಆದರೆ ಕಾಡಿನಲ್ಲಿ ಜೀವಿಸುವುದನ್ನೇ ಅರಿಯದ ಜೀವಿಗಳನ್ನು ಈ ರೀತಿ ಕಾಡಿಗೆ ಬಿಡುವುದರಿಂದ ಬಹಳ ದಿನ ಅವು ಜೀವಿಸುವುದಿಲ್ಲ. ಹೀಗೆ ಸತ್ತ ನಾಯಿಗಳಿಂದ ವನ್ಯ ಜೀವಿಗಳಿಗೆ ರೋಗ ಹರಡುತ್ತದೆ. ಹುಲಿಗಳು ಬೇಟೆಯಾಡಲು ದೈಹಿಕವಾಗಿ ನಿಶ್ಯಕ್ತವಾದಾಗ ಮಾತ್ರ ಸುಲಭವಾಗಿ ಸಿಗುವ ಆಹಾರವನ್ನು ಹುಡುಕುತ್ತದೆ. ಈ ಸಮಯದಲ್ಲಿ ಅದು ಜನವಸತಿ ಪ್ರದೇಶಗಳತ್ತ ಬರುತ್ತದೆ. ಆದರೆ ಕಾಡಿನ ಅಂಚು ಪ್ರದೇಶಗಳಲ್ಲಿ ಜೀವಿಸುವ ಚಿರತೆಗಳು ಬೇರೆ ಆಹಾರ ಸಿಗದಾಗ ಪರ್ಯಾಯವಾಗಿ ನಾಯಿಗಳನ್ನು ಬೇಟೆಯಾಡುತ್ತವೆ.
–ಕೃಪಾಕರ, ವನ್ಯಜೀವಿ ನಡವಳಿಕೆ ತಜ್ಞ
ಪ್ರಾಣಿಗಳಿಗೆ ಹರಡುವ ರೋಗಗಳು
ಬೀದಿನಾಯಿಗಳನ್ನು ಕಾಡಿಗೆ ಬಿಡುವುದರಿಂದ ‘ಕೆನಲ್ ಕಾಫ್’, ‘ಕೆನೈನ್ ಡಿಸ್ಟೆಂಪರ್’, ‘ಪಾರ್ವೋ ವೈರಲ್ ಎಂಟರೈಟೀಸ್’, ‘ಪಾರ್ವೋ ವೈರಲ್ ಗ್ಯಾಸ್ಟ್ರೋ ಎಂಟರೈಟೀಸ್’ ಹಾಗೂ ‘ಪ್ಯಾರಾ ಇನ್ಫ್ಲುಯೆನ್ಜಾ’ ರೋಗಗಳು ಗಾಳಿ ಮೂಲಕ ಹರಡಬಹುದು.
‘ಲ್ಯಾಪ್ಟೊ ಸ್ಪೈರೋಸಿಸ್’ (ಮೂತ್ರ ಸೇವನೆಯಿಂದ ಹರಡುತ್ತದೆ), ಜತೆಗೆ ರೇಬಿಸ್ ಸೋಂಕಿತ ನಾಯಿಗಳಿಂದ ರೇಬಿಸ್ ಸಹ ಬರಬಹುದು. ರೋಗ ನಿರೋಧಕ ಶಕ್ತಿ ಇಲ್ಲದ ವನ್ಯಜೀವಿಗಳು ವೈರಲ್ ಸೋಂಕಿನಿಂದ ಕೆಲವೇ ದಿನಗಳಲ್ಲಿ ಸಾವನ್ನಪ್ಪಬಹುದು.
–ಡಾ.ಎನ್.ಬಿ. ಶಿವಪ್ರಕಾಶ್, ಪಶುವೈದ್ಯರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.