ಕಸ್ತೂರಿ ನಗರದಲ್ಲಿ ಈಚೆಗೆ ಭಾನುವಾರ ರಸ್ತೆಗಳೆಲ್ಲವೂ ಆಟದ ಕಣಗಳಾಗಿದ್ದವು. ಚೌಕಬಾರಾ, ಪಗಡೆ ಆಟ, ಅಳೆಗುಳಿಮಣಿ ಜೊತೆಗೆ ಕುಂಟಾಬಿಲ್ಲೆ ಮುಂತಾದ ಆಟಗಳನ್ನು ಆಡಲು ಚಿಣ್ಣರಿಗೆ ಅವಕಾಶ ಕಲ್ಪಿಸಲಾಗಿತ್ತು.
‘ಇವ್ಯಾಂಜಿಕಲ್ ಸೋಷಿಯಲ್ ಆ್ಯಕ್ಷನ್ ಫೋರ್ಮ್’ನಿಂದ ಮಂಜು ಜಾರ್ಜ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿಮಲಾ ಗೌಡ ಅವರ ಪ್ರೋತ್ಸಾಹದಿಂದ ಬಡಾವಣೆಯ ಎಲ್ಲ ಮಕ್ಕಳೂ ಈ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಜನಪದ ಆಟಗಳಿಂದ ದೂರ ಸರಿದಿದ್ದ ಮಕ್ಕಳಿಗೆ ಈ ಒಂದು ದಿನದ ಬೀದಿ ಆಟಗಳು ಖುಷಿ ನೀಡಿದವು. ಮಕ್ಕಳಲ್ಲಿ ಗಣಿತ ಮತ್ತು ವಿಶ್ಲೇಷಣಾ ಬುದ್ಧಿಯನ್ನು ಚುರುಕುಗೊಳಿಸುವ ಈ ಆಟಗಳನ್ನು ಜನಪ್ರಿಯಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಮನಸು, ದೇಹ, ಬುದ್ಧಿ ಮೂರು ಅಂಶಗಳ ನಡುವೆ ಸಂಯೋಜನೆ, ಸಹಕಾರಗಳನ್ನು ಉತ್ತೇಜಿಸುವಂಥ ಈ ಆಟಗಳತ್ತ ಮಕ್ಕಳು ಮತ್ತೆ ಮರಳಲಿ ಎಂದು ಇಂಥ ಆಟಗಳನ್ನು ಆಯ್ಕೆ ಮಾಡಲಾಗಿತ್ತು. ಭಾನುವಾರ ಟೀವಿಯಿಂದ ದೂರ ಸರಿದ ಮಕ್ಕಳು, ಅಂಗಳವಿರದ ಮನೆಗಳಿಂದ ಬಂದ ಮಕ್ಕಳು ಒಂದೆರಡು ದಶಕಗಳ ಹಿಂದಿನ ಬಾಲ್ಯವನ್ನು ಮತ್ತೆ ಸವಿದರು. ಆಟವಾಡಿ, ನಕ್ಕು ನಲಿದರು.