ಕೊಳ್ಳೇಗಾಲ: ಬೀರದೇವರ ಹೊಸ ಅಲಗೆ ನಿರ್ಮಾಣದ ಹಿನ್ನೆಲೆಯಲ್ಲಿ ಕುರುಬ ಜನಾಂಗದ ದೇವತೆಗಳ ಮೆರವಣಿಗೆ ಬುಧವಾರ ಹಳೇ ಕುರುಬರಬೀದಿ ಹೊಸ ಕುರುಬರಬೀದಿಗಳಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕೆಂಪನಪಾಳ್ಯ ರಸ್ತೆಯ ಹುಚ್ಚಯ್ಯನಗುಡಿಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಉತ್ಸವದ ಅಂಗವಾಗಿ ಹೊಸ ಮತ್ತು ಹಳೇ ಕುರುಬರ ಬೀದಿಗಳನ್ನು ತಳಿರು ತೋರಣ ಹಾಗೂ ವರ್ಣಮಯ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಪ್ರತಿ ಮನೆಯ ಬಾಗಿಲಲ್ಲೂ ರಂಗೋಲಿ ಹಾಕಿ ಸಡಗರ ನಿರ್ಮಿಸಲಾಗಿತ್ತು. ಗುಂಡೇಗಾಲ ಅಯ್ಯ ದೇವರು, ಹುಚ್ಚಪ್ಪ ಬೀರದೇವರು, ಶಿವನಸಮುದ್ರ ಗದ್ದಿಗೆ, ಹುಚ್ಚಯ್ಯನ ಗುಂಡೇಗಾಲ ಬಸವ, ಸತ್ತಿಗೆ ಸೇರಿದಂತೆ ವಿವಿಧ ದೇವರ ಮೆರವಣಿಗೆ ನಡೆಯಿತು.
ಹೊಸ ಅಲಗೆ ನಿರ್ಮಾಣದ ಹಿನ್ನಲೆಯಲ್ಲಿ ತಾಲ್ಲೂಕಿನ ಸಿದ್ದೇಶ್ವರ ಬೆಟ್ಟದಲ್ಲಿ ಕುರುಬ ಜನಾಂಗದ ಎಲ್ಲ ಮುಖಂಡರು, ಯಜಮಾನರು ಪೂಜೆ ಸಲ್ಲಿಸಿದರು. ನಂತರ ಹೊಂಡರಬಾಳು, ಜಿನಕನಹಳ್ಳಿ ನರೀಪುರ ಚಿಕ್ಕಿಂದುವಾಡಿ, ಬಸ್ತೀಪುರ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿ ಬುಧವಾರ ಕೊಳ್ಳೇಗಾಲ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.