ಮತಿಘಟ್ಟ(ಬೀರೂರು): ಕಡೂರು ತಾಲ್ಲೂಕು ರೇವಣಸಿದ್ದೇಶ್ವರ ಸಂಸ್ಥಾನದ ಬಾಳಗಲ್ ಬೀರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು `ಹಲ್ಲುಮರಿ' ಪವಾಡ ಮಂಗಳವಾರ ಅದ್ದೂರಿಯಾಗಿ ನೆರವೇರಿತು.
ಸಂಪ್ರದಾಯದಂತೆ ಪ್ರತಿ 12 ವರ್ಷಗಳಿಗೆ ಒಮ್ಮೆ ನಡೆಯಬೇಕಿದ್ದ ಜಾತ್ರೆಯು ಕಾರಣಾಂತರಗಳಿಂದ 39ವರ್ಷಗಳ ಬಳಿಕ ನೆರವೇರಿದ್ದು, ಕುರುಬ ಸಮುದಾಯದ ಸಂಗೆಗೊಲ, ಮನ್ನೆಗೊಲ ಮತ್ತು ಕಡುಬುಗೊಲದ ಗುಡಕಟ್ಟು ಮತ್ತು 14 ಹರಿವಾಣದ ಗೌಡರುಗಳು ಸೇರಿ ಶ್ರೀಕಂಠ ವಡೆಯರ್ ಇವರ ನೇತೃತ್ವದಲ್ಲಿ ಜಾತ್ರೆಯನ್ನು ಆಯೋಜಿಸಿದ್ದರು.
ಒಂದುವಾರ ಕಾಲ ನಡೆದ ಕಾರ್ಯಕ್ರಮಗಳಲ್ಲಿ ಸಿಂಗಟಗೆರೆಯ ಸ್ಥಾನಿಕ ಬೀರಲಿಂಗೇಶ್ವರ,ಕುರುಬಗೆರೆ, ಬೀರೂರು, ಕಡೂರು, ಮಾದಿಹಳ್ಳಿ, ಚಿಕ್ಕಾರಳ್ಳಿ, ಮಾರಿಘಟ್ಟೆ, ಅರಕೆರೆ, ಬಾಣಾವರ, ವೈ.ಮಲ್ಲಾಪುರದ ಬೀರಲಿಂಗೇಶ್ವರ ಸ್ವಾಮಿ ಮತ್ತುಮತಿಘಟ್ಟದ ಬನಶಂಕರಮ್ಮ, ಅಂತರಘಟ್ಟಮ್ಮ, ಶಿವಶಂಕರಮ್ಮ, ಸಂಕಮ್ಮ ದೇವಿಯರು ಪಲ್ಲಕ್ಕಿಯಲ್ಲಿ ಆಗಮಿಸಿದ್ದರು. ಜಾತ್ರೆಯ ಅಂಗವಾಗಿ ಮೀಸಲು ಅಳೆಯುವುದು, ಸ್ವಾಮಿಯ ಪೂಜಾರಿ ಮತ್ತು ವೀರಗಾರರ ಪಟ್ಟಹಿಡಿಯುವುದು ಮುಂತಾದ ಕಾರ್ಯಕ್ರಮಗಳು ಮತಿಗಟ್ಟ ಹೊರವಲಯದ ಬಾಳಗಲ್ನಲ್ಲಿ ಸೋಮವಾರದವರೆಗೆ ನಡೆದವು.
ಮತಿಘಟ್ಟ ಹೊರವಲಯದ ಹೊನ್ನಾಳ ಬೀರಲಿಂಗೇಶ್ವರ ಸ್ವಾಮಿಯ ತೋಪಿನಲ್ಲಿ ಮಂಗಳವಾರ ಆಹ್ವಾನಿತ ದೇವರುಗಳ ಸಮ್ಮುಖದಲ್ಲಿ `ಹಲ್ಲುಮರಿ' ಪವಾಡವನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮತ್ತು ದಳವಾಯಿಗಳ ಮುಂದಾಳತ್ವದಲ್ಲಿ ವೀರಗಾರರು ನೆರವೇರಿಸಿದರು.
ಡೊಳ್ಳು ಮತ್ತು ಹಲಗೆಯ ಲಯಬದ್ಧ ವಾದ್ಯಗಳು ಪವಾಡ ವೀಕ್ಷಿಸುತ್ತಿದ್ದವರ ಹರ್ಷೋದ್ಗಾರಗಳ ನಡುವೆ ವೀರಗಾರರು ಪವಾಡ ನೆರವೇರಿಸಿದರು.
ತರೀಕೆರೆ, ಕಡೂರು, ಅರಕಲಗೂಡು, ಬಾಣಾವರ, ಬೀರೂರು ಮುಂತಾದ ಕಡೆಗಳ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡರು. ನಾಗರಾಜ್, ಪಾಣಿರುದ್ರಪ್ಪ, ಮಂಜುನಾಥ್, ಎಂ.ಜಿ.ಮಹೇಶ್, ಭಂಡಾರಿಗೌಡ, ಬೀರಪ್ಪ, ಗೋವಿಂದಪ್ಪ, ನಾರಾಯಣಸ್ವಾಮಿ ಮುಂತಾದವರು ನೇತೃತ್ವ ವಹಿಸಿದ್ದರು.