ಬಳ್ಳಾರಿ: ರಂಗತೋರಣ ಸಂಸ್ಥೆ ಆಶ್ರಯದಲ್ಲಿ ಭಾನುವಾರ ಇಲ್ಲಿ ಮುಕ್ತಾಯವಾದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಮ್ಯಾಕ್ಸಿಮಸ್ ನಾಟಕ ಪ್ರಥಮ ಸ್ಥಾನ ಪಡೆಯಿತು.
ಚಿಕ್ಕಮಗಳೂರಿನ ಐಡಿಜಿಎಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ `ದೇವಾನಾಂಪ್ರಿಯ~ ಹಾಗೂ ಬಳ್ಳಾರಿಯ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ `ಇದು ಕಾರಣ~ ನಾಟಕಗಳು ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.
ಇತರ ಪ್ರಶಸ್ತಿಗಳು ಇಂತಿವೆ: ಉತ್ತಮ ನಟ: ಬೀರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಶಿವರಾಜ್ (ನಾಟಕ: ಮ್ಯಾಕ್ಸಿಮಸ್); ಉತ್ತಮ ನಟಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಬೀನಾ ದೇವಳಿ (ನಾಟಕ: ನಮಗೆ ಬೇಕು ಬೆಳಕು); ಉತ್ತಮ ರಂಗ ಸಜ್ಜಿಕೆ: ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸತ್ರು ಅಂದ್ರೆ ಸಾಯ್ತಾರಾ...; ಉತ್ತಮ ನಿರ್ದೇಶಕ: ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಮಹಾವಿದ್ಯಾಲಯದ ಹರ್ಷ ಗೋಭಟ್ (ನಾಟಕ: ಬಿರುಗಾಳಿ)
ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಚನ್ನರಾಯ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಅತ್ಯುತ್ತಮ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ ಹಾವೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ರಾಯಚೂರಿನ ವೀರಶೈವ ಕಾಲೇಜು ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ತಂಡಗಳೆಂಬ ಪ್ರಶಸ್ತಿ ಪಡೆದವು.
ಪ್ರಶಸ್ತಿ ವಿಜೇತರಿಗೆ ಮಾದಾರ ಚನ್ನಯ್ಯ ಸ್ವಾಮೀಜಿ, ಏಣಗಿ ನಟರಾಜ್, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹಾಗೂ ಇತರರು ಬಹುಮಾನ ವಿತರಿಸಿದರು.