ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರ `ರಿಪಬ್ಲಿಕ್ ಆಫ್ ಬಳ್ಳಾರಿ~ಯ ಅಧೀನದ ಚಿಕ್ಕ ವಸಾಹತುವಿನಂತೆ ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಜಯಗಳಿಸಿದ್ದ ಗಣಿ ಉದ್ಯಮಿ ಸಂತೋಷ್ ಲಾಡ್ ದೂರದ ಬಳ್ಳಾರಿಯಿಂದ ವಲಸೆ ಬಂದವರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಆರಂಭದಲ್ಲಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಲಾಡ್, ನಂತರ ಇತ್ತ ಸುಳಿದದ್ದೇ ಅಪರೂಪ. ಲಾಡ್ ಬೆಂಬಲಿಗರೇ ಶಾಸಕರ ಅನುಪಸ್ಥಿತಿಯಲ್ಲಿ ಕ್ಷೇತ್ರದ ಆಗು-ಹೋಗುಗಳನ್ನು ನೋಡಿಕೊಳ್ಳುತ್ತಿದ್ದರು.
ಮೂರು ವರ್ಷಗಳ ನಂತರ ಇತ್ತೀಚೆಗೆ ಸಂತೋಷ್ ಲಾಡ್ ಮತ್ತೆ ಕಲಘಟಗಿಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಸಮಾರಂಭವೊಂದನ್ನು ನಡೆಸಿ ಎಸ್ಎಸ್ಎಲ್ಸಿಯಿಂದ ಪದವಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ತಲಾ ಒಂದೂವರೆ ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಿದ್ದಾರೆ. ಕಳೆದ ಶ್ರಾವಣದಲ್ಲಿ ವರಮಹಾಲಕ್ಷ್ಮಿ ಹಬ್ಬದ ನೆಪದಲ್ಲಿ ಕ್ಷೇತ್ರದ ಎ್ಲ್ಲಲ ಮಹಿಳೆಯರಿಗೆ ಸೀರೆ ವಿತರಿಸಿದ್ದಾರೆ.
37 ಲಕ್ಷ ರೂಪಾಯಿ ಖರ್ಚು ಮಾಡಿ ಕಲಘಟಗಿ ಮತದಾರರ ಹೆಸರಿನಲ್ಲಿ ಸಾಮೂಹಿಕ ವಿಮೆ ಮಾಡಿಸಿದ್ದಾರೆ. ಕ್ಷೇತ್ರದಲ್ಲಿ ಮೂರು ಎಕರೆ ಜಮೀನು ಹೊಂದಿದ ಪ್ರತೀ ರೈತನಿಗೆ ಕೊಳವೆ ಬಾವಿ ಕೊರೆಸಲು, ಕುಟುಂಬಕ್ಕೊಂದು ಎಮ್ಮೆ ಕೊಡಿಸಲು ಮುಂದಾಗಿದ್ದಾರೆ. ಸ್ವಂತ ಖರ್ಚಿನಲ್ಲಿಯೇ ಕಲಘಟಗಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ.
ಶಾಸಕರ ಈ ದಿಢೀರ್ ಚಟುವಟಿಕೆಗಳು ಮುಂಬರುವ ಚುನಾವಣೆಗೆ ಸಿದ್ಧತೆ ಎಂಬುದು ವಿರೋಧ ಪಕ್ಷಗಳ ಆರೋಪ.
ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆರೆಗಳ ಹೂಳು ತೆಗೆಸಿ, ರಸ್ತೆ ಮಾಡಿಸಿ ಜನರಿಗೆ ಶಾಶ್ವತ ಉದ್ಯೋಗ ನೀಡುವಂತಹ ಕೈಗಾರಿಕೆಗಳನ್ನು ತರುವ ಬದಲು `ಉಡುಗೊರೆ~ ಹೆಸರಲ್ಲಿ ಅಗ್ಗದ ಅಮಿಷಗಳನ್ನು ನೀಡಿ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ ಎಂದು ಶಾಸಕರ ವಿರೋಧಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕಾಂಗ್ರೆಸ್ ಬೆಂಬಲಿಸಿದ ಕ್ಷೇತ್ರ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ಕಲಘಟಗಿ ತಾಲ್ಲೂಕಿನಲ್ಲಿ ವಿವಿಧ ಯೋಜನೆಗಳ ಜಾರಿಯಲ್ಲಿ ತಾರತಮ್ಯ ಮಾಡುತ್ತಿದೆ. ಸರ್ಕಾರ ಕೊಡದ ಕಾರಣ ಸ್ವಂತ ಹಣ ಖರ್ಚು ಮಾಡಿ ಜನರಿಗೆ ಸವಲತ್ತು ನೀಡಿದರೆ ತಪ್ಪೇನು?
ಎಂದು ಪ್ರಶ್ನಿಸುವ ಶಾಸಕ ಸಂತೋಷ ಲಾಡ್.
ರಾಜಕೀಯ ಕಾರಣಕ್ಕಾಗಿ ವಿರೋಧಿಗಳು ತಮ್ಮನ್ನು ಟೀಕಿಸುವುದು ಸಲ್ಲ. ಕ್ಷೇತ್ರದಲ್ಲಿ ಇದ್ದೇ ಅಭಿವೃದ್ಧಿ ಕಾರ್ಯ ಮಾಡಬೇಕು ಎಂಬುದೇನೂ ಇಲ್ಲ. ಹೊರಗಿದ್ದರೂ ಅಭಿವೃದ್ಧಿ ಮಾಡಬಹುದು ಎನ್ನುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.